ಉಡುಪಿ: ಮನೆಯಲ್ಲಿ ಕೇಳಿದಷ್ಟು ಖರ್ಚಿಗೆ ಕಾಸು ಕೊಡುತ್ತಿಲ್ಲ ಎಂದು ತನ್ನ ಪೋಷಕರನ್ನೇ ಯಾಮಾರಿಸಲು ಹೊರಟ ಯುವಕನ ಕಥೆ ಇದು. ಪೊಲೀಸರ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಮೋಸ ಮಾಡಲು ಹೊರಟ ಯುವಕ ಅಂದರ್ ಆಗಿದ್ದಾನೆ.
ನನ್ನನ್ನು ಅಪಹರಣ ಮಾಡಿದ್ದಾರೆ. ಕಿಡ್ನಾಪರ್ಸ್ 5,00,000 ರೂ. ಕೇಳುತ್ತಿದ್ದಾರೆ ಇಲ್ಲದಿದ್ದರೆ ನನ್ನನ್ನು ಕೊಂದೇ ಬಿಡುತ್ತಾರೆ. ಬೇಗ ಹಣ ಅರೇಂಜ್ ಮಾಡಿ ಎಂದು ಉಡುಪಿ ನಗರದ ಹೊರವಲಯದ ಪುತ್ತೂರು ಗ್ರಾಮದ ಅಂಬಾಗಿಲು ನಿವಾಸಿ ವರುಣ್ ಮನೆಯವರಿಗೆ ಫೋನ್ ಮಾಡಿದ್ದಾನೆ. ಗಾಬರಿಗೊಂಡ ಪೋಷಕರು ಕೂಡಲೇ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಹರಣ ಕೇಸ್ ಪತ್ತೆಹಚ್ಚಲು ಪೊಲೀಸರು ತಂಡ ರಚನೆ ಮಾಡಿದ್ದಾರೆ. ಫೋನ್ ಲೊಕೇಶನ್ ಪತ್ತೆ ಹಚ್ಚಿದಾಗ ಯುವಕ ಗೋವಾದಲ್ಲಿ ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಗೋವಾಗೆ ಪೊಲೀಸರ ತಂಡ ತೆರಳಿ ಹುಡುಕಾಟ ಮಾಡಿದೆ. ಈ ಸಂದರ್ಭದಲ್ಲಿ ಯುವಕ ಬೇರೆ ಬೇರೆ ಕಡೆ ಸುತ್ತಾಡುತ್ತಿದ್ದ. ಗೋವಾಗೆ ತೆರಳಿದ್ದ ಪೊಲೀಸರಿಗೆ ಶಾಕ್ ಆಗಿತ್ತು. ಕಾಣೆಯಾಗಿದ್ದೇನೆ ಎಂದು ಫೋನ್ ಮಾಡಿದ್ದ ವರುಣ್ ನಾಯಕ್, ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ನಿರತನಾಗಿದ್ದ. ಇದನ್ನೂ ಓದಿ: ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘೋರ, ಜಾಮೀನು ರಹಿತ ಅಪರಾಧ – ಹೈಕೋರ್ಟ್
ಗೋವಾದ ಕ್ಯಾಸಿನೋದಲ್ಲಿ ಆಟವಾಡುತ್ತಿದ್ದ ಯುವಕ, ಪೋಷಕರಲ್ಲಿದ್ದ ಹಣ ದೋಚಲು ಸಂಚು ಮಾಡಿದ್ದ. ಇದನ್ನು ಯುವಕ ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪೋಷಕರ ಹಣ ಎಗರಿಸುವ ಸಂಚು ಮಾಡಿದ್ದ ಯುವಕ ಉಡುಪಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಂಚಕ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನವಾಗಿದೆ. ಪೊಲೀಸರಿಗೆ ಯಾಮಾರಿಸಿರುವ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸರಿಯಾಗಿ ಬೈಕ್ ಓಡಿಸಿ ಎಂದಿದ್ದಕ್ಕೆ ವ್ಯಕ್ತಿಯ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ