ಬಳ್ಳಾರಿ: ಬಳ್ಳಾರಿಯ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy)ಮನೆ ಹಾಗೂ ಕಚೇರಿ ಮೇಲೆ ಶನಿವಾರದಂದು ಇ.ಡಿ (E.D) ದಾಳಿ ನಡೆಸಿದ್ದು, ಇಂದು ಕೂಡ ಅಧಿಕಾರಿಗಳ ಪರಿಶೀಲನೆ ಮುಂದುವರಿಯಲಿದೆ.
ಶನಿವಾರ ಬೆಳಗ್ಗೆ 6:30ಕ್ಕೆ ಭರತ್ ರೆಡ್ಡಿ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದರು. 24 ಗಂಟೆಗಳಾದರೂ ಇ.ಡಿ ಅಧಿಕಾರಿಗಳ ಪರಿಶೀಲನೆ ಮುಗಿಯಲೇ ಇಲ್ಲ. ದಿನವಿಡೀ ನಡೆದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಅಲ್ಲದೇ ಭರತ್ ಅಪ್ತರು ಮತ್ತು ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೂ ಇ.ಡಿ ದಾಳಿ ನಡೆಸಿದೆ. ಭರತ್ ಅವರ ಚಿಕ್ಕಪ್ಪ ಪ್ರತಾಪ್ ರೆಡ್ಡಿ, ಆಪ್ತರಾದ ರತ್ನ ಬಾಬು ಮತ್ತು ಸತೀಶ್ ರೆಡ್ಡಿ ಮನೆಗಳಲ್ಲೂ ಶೋಧ ಕಾರ್ಯ ನಡೆಸಿದ್ದಾರೆ. ಇಂದು ಇನ್ನಷ್ಟು ಆಪ್ತರು ಮತ್ತು ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ಬೆಂಗಳೂರು ರೈಲುಗಳು ಹೈಟೆಕ್- 6 ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಜಾರಿ
ಅದಾಯಕ್ಕಿಂತಲೂ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಇ.ಡಿ ದಾಳಿ ನಡೆಸಿದೆ. ಚುನಾವಣೆಗೂ ಮುನ್ನ ಸೆಂಟ್ರಲ್ ಐ.ಟಿ ತಂಡ ದಾಳಿ ನಡೆಸಿತ್ತು. ಬಳಿಕ ಐಟಿಯಿಂದ ಇ.ಡಿಗೆ ಪ್ರಕರಣ ವರ್ಗಾವಣೆಯಾದ ಹಿನ್ನೆಲೆ ನಿನ್ನೆ ತಡರಾತ್ರಿವರೆಗೂ ಭರತ್ ಹಾಗೂ ಅವರ ತಂದೆ ಒಡೆತನದ ರಾಘವೇಂದ್ರ ಎಂಟರ್ಪ್ರೈಸಸ್ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ- ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ?
ಮಾಜಿ ಶಾಸಕರಾದ ಸೂರ್ಯ ನಾರಾಯಣ ರೆಡ್ಡಿ ಅವರು ಭರತ್ ತಂದೆ. ಸುಮಾರು ವರ್ಷಗಳಿಂದ ಗ್ರಾನೈಟ್ ಉದ್ಯಮ ಮಾಡಿಕೊಂಡು ಬಂದಿದ್ದು, ನೂರಾರು ಕೋಟಿ ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶದಲ್ಲಿ ಮತ್ತು ಕೊಪ್ಪಳ ಜೆಲ್ಲೆಯಲ್ಲಿ ಗ್ರಾನೈಟ್ ಕ್ವಾರಿಗಳನ್ನ ಹೊಂದಿದ್ದಾರೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಸೇರಿ ಬೆಂಗಳೂರಿನಲ್ಲಿ 4 ದಿನ ಮದ್ಯ ಬಂದ್!