ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ (Vinay Guruji) ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಿಡಿಗೇಡಿಗಳು ಹಣ ಪೀಕಲು ಮುಂದಾದ ಪ್ರಸಂಗ ನಡೆದಿದೆ.
ಸಾಮಾಜಿಕ ಜಾಲತಾಣ (Social Media) ದಲ್ಲಿ ನಕಲಿ ಖಾತೆ ಸೃಷ್ಟಿಸಿರೋ ಕಿಡಿಗೇಡಿಗಳು, ಬದುಕಿನ ಬಗ್ಗೆ ಭಯ ಹುಟ್ಟಿಸುವ ಸಂದೇಶಗಳನ್ನ ಹಾಕುವ ಮೂಲಕ ಹಣಕ್ಕಾಗಿ ಪೀಡಿಸುತ್ತಿದ್ದಾರೆ.
ಅವಧೂತ ವಿನಯ್ ಗುರೂಜಿಯೇ ಮೆಸೇಜ್ (Message) ಮಾಡಿದಂತೆ ಮಾಡಿ ನಿಮ್ಮ ಡೇಟ್ ಆಫ್ ಬರ್ತ್ ಏನು?. ನಿಮಗೆ ಕಾಳಸರ್ಪ ದೋಷವಿದೆ. ನೀವು ಒಂದು ವಾರ ಮನೆ ಬಿಟ್ಟು ಹೋಗಬಾರದು, ಪಾರ್ಕ್, ಹೊರಗಡೆ ಎಲ್ಲೂ ಹೋಗಬಾರದು. ನಿಮಗೆ ದೇವರ ಮೇಲೆ ನಂಬಿಕೆ ಇಲ್ಲ ಅನಿಸತ್ತೆ. ನಿಮ್ಮನ್ನು ದೇವರೇ ಕಾಪಾಡಬೇಕು. 45 ದಿನದಲ್ಲಿ ನಿಮಗೆ ದೋಷ ಇದೆ ಎಂದು ಭಯ ಹುಟ್ಟಿಸುವಂತಹ ಸಂದೇಶಗಳನ್ನು ಕಳುಹಿಸಿ ಹಣ ಕೀಳುವ ದಂಧೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಇಲಾಖೆಯನ್ನು ಕೇಸರೀಕರಣಗೊಳ್ಳಲು ಬಿಡುವುದಿಲ್ಲ: ಡಿಕೆಶಿ
ಈ ಸಂದೇಶಗಳ ಬಗ್ಗೆ ಸ್ಪಷ್ಟಪಡಿಸಿರೋ ಮಠದ ಸಿಬ್ಬಂದಿ ಆ ರೀತಿ ಗುರುಗಳು ಯಾರಿಗೂ ಮೆಸೇಜ್ ಮಾಡುವುದಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಸಾಮಾಜಿಕ ಜಾಲತಾಣವನ್ನ ದುರುಪಯೋಗಪಡಿಸಿಕೊಂಡು ಮಠ, ಸ್ವಾಮಿಜಿಯ ಹೆಸರನ್ನ ಹಾಳು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಅವಧೂತ ವಿನಯ್ ಗುರೂಜಿಯವರನ್ನ ನಡೆದಾಡುವ ದೈವ ಎಂದೇ ಭಕ್ತಗಣ ಕರೆಯುತ್ತದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ವಿನಯ್ ಗುರೂಜಿ ಪಾದಪೂಜೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ವಿನಯ್ ಗುರೂಜಿ ಭಕ್ತರಾಗಿದ್ದು, ಹಲವು ಬಾರಿ ಮಠಕ್ಕೆ ಭೇಟಿ ನೀಡಿದ್ದಾರೆ.