ಶಿವಮೊಗ್ಗ: ಈ ದೇಶದ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ದವೇ ಮರ್ಡರ್ ಕೇಸ್ ಇದೆ. ಆತನ ವಿರುದ್ಧ ಈ ದೇಶ ಬಿಟ್ಟು ಹೋಗುವಂತೆ ಗಡಿಪಾರು ಆದೇಶ ಇತ್ತು. ಹೀಗಿರುವಾಗ ಬಿಜೆಪಿಗೆ ಇನ್ನು ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ (BJP) ವಿರುದ್ದ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಹೇಳುವುದೊಂದು, ಮಾಡುವುದು ಮತ್ತೊಂದು. ಹೀಗಾಗಿ ಅವರಿಗೆ ಯಾವುದೇ ನೈತಿಕತೆ ಇಲ್ಲ. ರೌಡಿಶೀಟರ್ ಸೈಲೆಂಟ್ ಸುನೀಲನ ಜೊತೆ ಸಂಸದರಾದ ಮೋಹನ್, ತೇಜಸ್ವಿ ಸೂರ್ಯ ಹೋಗಿದ್ದರು. ಹೀಗಿರುವಾಗ ಪೊಲೀಸರು ಆತನನ್ನು ಬಂಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದು ಆಪ್ತರಿಂದ ಸಿದ್ದರಾಮಯ್ಯ ಮುಂದಿನ ಸಿಎಂ ಜಪ
ಸಂಸದರೇ ರೌಡಿಶೀಟರ್ಗಳ ಜೊತೆ ಇದ್ದಾಗ ಪೊಲೀಸರು ಬಂಧಿಸುವ ಧೈರ್ಯ ತೋರುತ್ತಾರಾ? ಇಂತಹವರಿಂದ ಕಾನೂನು ಕ್ರಮ ಕೈಗೊಳ್ಳಲು, ಶಿಕ್ಷೆ ಕೊಡಿಸಲು ಸಾಧ್ಯವೇ ಎಂದು ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದರು.
ಸಿ.ಟಿ.ರವಿ ಒಬ್ಬ ಕೋಮುವಾದಿ. ಅವನಿಗೆ ಜಾತ್ಯತೀತ ತತ್ವ, ಸಂವಿಧಾನದ ತತ್ವದ ಬಗ್ಗೆ ಗೊತ್ತಿಲ್ಲ. ಕೋಮುವಾದಿಯ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳುವ ಮೂಲಕ ಸಿ.ಟಿ.ರವಿ ವಿರುದ್ದ ಗುಡುಗಿದರು. ಇದನ್ನೂ ಓದಿ: ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ