ಬಿಗ್ ಬಾಸ್ (Big Boss) ಮನೆಯಿಂದ ಬಂದಿರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿರುವ ವರ್ತೂರ್ ಸಂತೋಷ್ (Varthur Santhosh) ಅವರನ್ನು ನಿನ್ನೆ ಅವರ ಮನೆಯಲ್ಲಿ ಸನ್ಮಾನ ಮಾಡಿದ್ದ ವರ್ತೂರು ಠಾಣೆಯ ಎಸ್.ಐ ತಿಮ್ಮರಾಯಪ್ಪ (Thimmarayappa) ಅವರನ್ನು ಎತ್ತಂಗಡಿ ಮಾಡಲಾಗಿದೆ.
ವರ್ತೂರು ಠಾಣೆಯಿಂದ ತಿಮ್ಮರಾಯಪ್ಪ ಅವರನ್ನು ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ನಿನ್ನ ವರ್ತೂರು ಮನೆಗೆ ತೆರಳಿದ್ದ ತಿಮ್ಮರಾಯಪ್ಪ, ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಸನ್ಮಾನ ಮಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಕೇವಲ ವರ್ತೂರು ಪೊಲೀಸ್ ಠಾಣೆಯ ಎಸ್ಐ ತಿಮ್ಮರಾಯಪ್ಪ ಮಾತ್ರವಲ್ಲ, ಠಾಣೆಯ ಸಿಬ್ಬಂದಿ ಕೂಡ ಈ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ನಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತೀಚಿಗೆ ಕೆಲ ತಿಂಗಳ ಹಿಂದೆ ವರ್ತೂರು ಸಂತೋಷ್ ಹುಲಿ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದಿದ್ದ.
ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದಿರೋ ವಿಚಾರ ಗೊತ್ತಿದ್ದರು ಸಹ ಸನ್ಮಾನ ಮಾಡಿರುವ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು. ಸ್ವತಃ ಹಿರಿಯ ಅಧಿಕಾರಿಗಳು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಅದರಲ್ಲೂ ಯೂನಿಫಾರ್ಮ್ ನಲ್ಲಿಯೇ, ಸಿಬ್ಬಂದಿ ಗಳ ಜೊತೆಗೆ ಹೋಗಿ ಅಧಿಕಾರಿ ಸನ್ಮಾನ ಮಾಡಿದ್ದು ಬೇಸರಕ್ಕೂ ಕಾರಣವಾಗಿತ್ತು.