ಭಾರತದ ಹಳ್ಳಿಗಳು, ಕಾಡಂಚಿನ ಪ್ರದೇಶಗಳ ನಿರ್ಲಕ್ಷ್ಯದಿಂದಾಗಿ ಭಾರತದಲ್ಲಿ ತಲೆಯೆತ್ತಿದ ನಕ್ಸಲಿಸಂ ದಶಕಗಳ ಕಾಲ ಇಡೀ ದೇಶವನ್ನೇ ನಡುಗಿಸಿತ್ತು. ನಕ್ಸಲರು ಸೃಷ್ಟಿಸಿದ್ದ ರೆಡ್ ಕಾರಿಡಾರ್ಗಳಲ್ಲಿ ಕಡೆಗೂ ಶಾಂತಿಯ, ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದ್ದು, ಭಾರತ ನಕ್ಸಲ್ ಮುಕ್ತವಾಗಿದೆ ಅಂತ ಹೇಳಲಾಗುತ್ತಿದೆ.
2026ರ ಮಾರ್ಚ್ 31ರ ಒಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸಲಾಗುವುದು ಎಂದು ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿತ್ತು. ಗಡುವು ಕೊನೆಗೊಳ್ಳಲು ಒಂದು ದಿನ ಬಾಕಿ ಇರುವಾಗಲೇ ʻಭಾರತ ಈಗ ನಕ್ಸಲ್ ಮುಕ್ತವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪ್ರಕಟಿಸಿದ್ದರು. ಇದು ಬಹುಪಾಲು ನಿಜವೂ ಹೌದು. ಛತ್ತೀಸಗಢ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ 200ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಕ್ಸಲ್ ಚಳವಳಿ ಹಬ್ಬಿತ್ತು. ಶಾ ಅವರ ಹೇಳಿಕೆ ಪ್ರಕಾರ, ‘ಕೆಂಪು ಕಾರಿಡಾರ್’ ಈಗ ಎರಡು ಜಿಲ್ಲೆಗಳಿಗಷ್ಟೇ ಸೀಮಿತವಾಗಿದೆ. ‘ನಕ್ಸಲ್ ಚಳವಳಿಯ ನಿರ್ಣಾಯಕ ಸ್ಥಾನದಲ್ಲಿದ್ದ ಅಗ್ರ 21 ನಾಯಕರಲ್ಲಿ 20 ಮಂದಿಯನ್ನು ತಟಸ್ಥಗೊಳಿಸಲಾಗಿದೆ. 12 ಮಂದಿಯನ್ನು ಹತ್ಯೆ ಮಾಡಲಾಗಿದ್ದರೆ, ಏಳು ಜನ ಶರಣಾಗಿದ್ದಾರೆ. ಮತ್ತೊಬ್ಬರನ್ನು ಬಂಧಿಸಲಾಗಿದೆ’ ಎಂದು ಸರ್ಕಾರ ಹೇಳಿಕೊಂಡಿದೆ. ಭದ್ರತಾ ಪಡೆಗಳ ನಿರಂತರ ಶಕ್ತಿ ಪ್ರಯೋಗದ ಪರಿಣಾಮ ನಕ್ಸಲ್ ಚಳವಳಿಯ ಎಲ್ಲ ಹಂತಗಳ ನಾಯಕತ್ವವೂ ಸಂಪೂರ್ಣವಾಗಿ ನೆಲಕಚ್ಚಿದೆ. ಇತ್ತೀಚಿನ ತಿಂಗಳುಗಳಲ್ಲಿ ಯಾವುದೇ ಪ್ರಮುಖ ನಕ್ಸಲ್ ಚಟುವಟಿಕೆಯೂ ವರದಿಯಾಗಿಲ್ಲ. ಇದು ಅಮಿತ್ ಶಾ ಅವರ ನಕ್ಸಲ್ ಮುಕ್ತ ಹೇಳಿಕೆಗೆ ಪೂರಕವಾಗಿದೆ. ಈ ಮಧ್ಯೆ ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಉನ್ನತ ನಕ್ಸಲ್ ಕಮಾಂಡರ್ ಒಬ್ಬಳ ಹತ್ಯೆಯಾಗಿರುವುದು, ನಕ್ಸಲಿಂ 100% ಮುಕ್ತವಾಗಿದೆಯೇ ಅನ್ನೋದು ಪ್ರಶ್ನೆಯಾಗಿ ಉಳಿಯುವಂತೆ ಮಾಡಿದೆ.
ನಕ್ಸಲ್ ವಾದ ಹುಟ್ಟಿದ್ದೆಲ್ಲಿ?
ʻನಕ್ಸಲ್ ವಾದ ಎನ್ನುವ ಶಬ್ದ ಹುಟ್ಟಿಕೊಂಡಿದ್ದು ಪಶ್ಚಿಮ ಬಂಗಾಳದ ʻನಕ್ಸಲ್ಬಾರಿ’ ಎಂಬ ಹೆಸರಿನ ಸಣ್ಣದೊಂದು ಹಳ್ಳಿಯ ಕಾರಣದಿಂದ. ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಚಾರೂ ಮಜುಮ್ಹಾರ್ ಮತ್ತು ಕಾನೂ ಸನ್ಯಾಲ್ ಎಂಬಿಬ್ಬರು ಇದೇ ಹಳ್ಳಿಯಲ್ಲಿ, 1967 ರಲ್ಲಿ, ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟ ಆರಂಭಿಸಿದರು. ವಾಸ್ತವದಲ್ಲಿ ಇದೊಂದು ರೈತ ಚಳುವಳಿಯಾಗಿತ್ತು. ಜಮೀನ್ದಾರರ ವಿರುದ್ಧ ಈ ಹೋರಾಟ ನಡೆಯಿತು. (ಚಾರೂ ಮಜುಮ್ಹಾರ ಅವರು ಚೀನಾದ ಕಮ್ಯುನಿಸ್ಟ್ ನಾಯಕ ಮಾವೋತ್ಸೆ ತುಂಗ ಅವರ ಕಟ್ಟಾ ಅನುಯಾಯಿ. ಹಾಗಾಗಿ ‘ನಕ್ಸಲ್ ವಾದವನ್ನು ‘ಮಾವೋ ವಾದ’ ಎಂದೂ ಕರೆಯಲಾಗುತ್ತದೆ). ಯಾರು ಹೊಲವನ್ನು ಉಳುತ್ತಾರೆಯೋ ಅವರಿಗೇ ಆ ಹೊಲದ ಸಂಪೂರ್ಣ ಅಧಿಕಾರ ಸಿಗಬೇಕು’ ಎನ್ನುವುದು ಇವರ ಹೋರಾಟದ ಮುಖ್ಯ ಉದ್ದೇಶವಾಗಿತ್ತು.
1969ರಲ್ಲಿ ನಕ್ಸಲ್ ಬಾರಿಯ ಈ ಹೋರಾಟ ಅಕ್ಕಪಕ್ಕದ ಇತರ ರಾಜ್ಯಗಳಿಗೂ ವ್ಯಾಪಿಸಿತು. 1972ರಲ್ಲಿ ಚಾರೂ ಮಜುಮ್ಹಾರರನ್ನ ಬಂಧಿಸಲಾಯಿತು. ಅವರು ಸೆರೆಮನೆಯಲ್ಲಿದ್ದಾಗಲೇ ನಿಧನ ಹೊಂದಿದರು. ಆ ಸಂದರ್ಭದಲ್ಲಿ ಹೋರಾಟ ಹಿಂಸಾ ಸ್ವರೂಪ ಪಡೆದುಕೊಂಡಿತು. ಇದೇ ಹೋರಾಟದ ಪ್ರಭಾವದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡಿತು ಮತ್ತು 1977ರಲ್ಲಿ ಜ್ಯೋತಿ ಬಸು ನೇತೃತ್ವದ ಕಮ್ಯೂನಿಸ್ಟ್ ಪಕ್ಷದ ಸರಕಾರ ರಚನೆಯಾಯಿತು.
ಆದ್ರೆ ನಕ್ಸಲ್ವಾದವು ಈಗ ದೇಶದಲ್ಲಿ ಮೊದಲಿನಂತೆ ರಾಜಕೀಯ ಇಲ್ಲವೆ ರಾಷ್ಟ್ರೀಯ ಭದ್ರತೆಯ ಬೆದರಿಕೆಯಾಗಿ ಉಳಿದಿಲ್ಲ. ಏಕೆಂದ್ರೆ ಮಧ್ಯ ಮತ್ತು ಪೂರ್ವ ಭಾರತದ ಅರಣ್ಯ ಪ್ರದೇಶಗಳಲ್ಲಿ ಬಡತನ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಕೆಲವು ದಶಕಗಳ ಹಿಂದೆ ಇದ್ದಷ್ಟು ಈಗ ತೀವ್ರವಾಗಿಲ್ಲ. ಸರ್ಕಾರದ ಕಲ್ಯಾಣ ಯೋಜನೆಗಳು ಅಂಚಿನಲ್ಲಿರುವ ಬಹುತೇಕ ಸಮುದಾಯಗಳನ್ನು ತಲಪಿರುವುದು ಕೂಡ ನಿಜ. “ನಕ್ಸಲ್ ಸಾಮ್ರಾಜ್ಯ’ದ ಬಹುಪಾಲು ಪ್ರದೇಶಗಳಲ್ಲಿ ರಸ್ತೆ ಮತ್ತು ಸಂಪರ್ಕ ಜಾಲ ಸೇರಿದಂತೆ ಮೂಲಸೌಕರ್ಯದಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಈ ಬದಲಾವಣೆಗಳ ಪರಿಣಾಮ, ನಕ್ಸಲ್ಪೀಡಿತ ಪ್ರದೇಶಗಳು ಮುಖ್ಯವಾಹಿನಿಯೊಂದಿಗೆ ಸಾಮಾಜಿಕ-ಆರ್ಥಿಕ ಸಂಬಂಧಗಳನ್ನು ಸಾಧಿಸುವಂತಾಗಿದೆ.
ಹೆಚ್ಚಿದ ಮೂಲಸೌಕರ್ಯಗಳಿಂದಾಗಿ ಭದ್ರತಾ ಪಡೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲೂ ಸಾಧ್ಯವಾಗಿದೆ. ಚಳವಳಿಯು ಧ್ವನಿ ಕಳೆದುಕೊಳ್ಳಲು ಹೀಗೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ನಕ್ಸಲ್ ಚಳವಳಿಯು ಇನ್ನುಮುಂದೆ ಸಂಘಟಿತ ಬಂಡುಕೋರ ಶಕ್ತಿಯಾಗಿ ಉಳಿಯದೇ ಇರಬಹುದು. ಆದರೆ, ಚಳವಳಿಯನ್ನು ಸಂಪೂರ್ಣವಾಗಿ ಸೋಲಿಸಲಾಗಿದೆ ಎಂದು ಈಗಲೇ ಘೋಷಿಸುವುದು ಆತುರದ ಕ್ರಮವಾದೀತು. ಭೂಕಬಳಿಕೆ, ಶೋಷಣೆ, ಆಡಳಿತ ಮತ್ತು ಜನರ ನಡುವಿನ ಅಂತರಗಳು ಭಾರತದಲ್ಲಿ ಇಂದಿಗೂ ವಾಸ್ತವವಾಗಿಯೇ ಉಳಿದಿವೆ.
ಕರ್ನಾಟಕದಲ್ಲಿ ನಕ್ಸಲ್ ಹುಟ್ಟು – 2002 ರಲ್ಲಿ ಮೊದಲ ಎನ್ಕೌಂಟರ್
1985 ರ ಸಂದರ್ಭದಲ್ಲೇ ಕರ್ನಾಟಕದಲ್ಲಿ ಬೇರೂರಲು ಪ್ರಯತ್ನಿಸುತ್ತಿದ್ದ ನಕ್ಸಲ್ ಚಳವಳಿ ಪಶ್ಚಿಮ ಘಟ್ಟದಲ್ಲಿ ಸದ್ದು ಮಾಡಿತ್ತು. ಸಾಕೇತ್ ರಾಜನ್ ನಂತಹ ಪ್ರಭಾವಿ ನಕ್ಸಲ್ ನಾಯಕ ಮಾವೋವಾದಿ ಹೋರಾಟಕ್ಕೆ ಸಾಂಸ್ಥಿಕ ರೂಪವನ್ನು ನೀಡಿದ್ದರು. ಕರ್ನಾಟಕದ ನಕ್ಸಲ್ ಹೋರಾಟದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಚುರುಕುರಿ ರಾಜ್ ಕುಮಾರ್ ಯಾನೆ ಆಝಾದ್. ನಕ್ಸಲ್ ಚಳವಳಿಯಲ್ಲಿ ಆಝಾದ್ ಎಂದೇ ಗುರುತಿಸಿಕೊಂಡಿದ್ದ ರಾಜ್ಕುಮಾರ್ ರಾಜ್ಯದಲ್ಲಿ ನಕ್ಸಲ್ ಚಳವಳಿಯನ್ನು ಪರಿಣಾಮಕಾರಿಯಾಗಿ ಕಟ್ಟುವಲ್ಲಿ ಆರಂಭಿಕ ಹಂತದ ಯಶಸ್ಸು ಕಂಡಿದ್ದರು. ಗೌಪ್ಯವಾಗಿ ಶುರುವಾಗಿದ್ದ ಈ ಚಳವಳಿ ನಂತರ ಜನರ ನಡುವೆ ಬೆಳೆಯಲು ಆರಂಭಿಸಿತ್ತು. 2002ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸಿನಹಾಡ್ಯದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿ ನಡೆದಿತ್ತು. ಇದು ಮೊದಲ ಎನ್ಕೌಂಟರ್ ಆಗಿತ್ತು. ಆಂಧ್ರಪ್ರದೇಶದ ಪೀಪಲ್ಸ್ ವಾರ್ ಗ್ರೂಪ್ ಕರ್ನಾಟದಲ್ಲಿ ನಕ್ಸಲ್ ಚಳವಳಿಯನ್ನು ಆಳವಾಗಿ ಬೇರೂರಿಸಲುವಲ್ಲಿ ಪ್ರಯತ್ನವನ್ನು ನಡೆಸಿತ್ತು. ಸದ್ಯ ಕರ್ನಾಟಕ ನಕ್ಸಲ್ ಮುಕ್ತ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದ್ರೆ ಇದು ನೂರರಲ್ಲಿ ಎಷ್ಟು ಪಾಲು ನಿಜ ಅನ್ನೋದು ಪ್ರಶ್ನೆಯಾಗಿ ಉಳಿದಿದೆ.
ನಕ್ಸಲರ ನಿರ್ಮೂಲನೆಗೆ ಸರ್ಕಾರದ ದಿಟ್ಟ ಹೆಜ್ಜೆಗಳೇನು?
ಹಿಂಸಾತ್ಮಕ ಮಾರ್ಗ ಅನುಸರಿಸುತ್ತಿದ್ದ ನಕ್ಸಲ್ ವಾದಿಗಳನ್ನು ನಿಯಂತ್ರಿಸುವುದು ಅನಿವಾರ್ಯವಾದ ಕಾರಣದಿಂದಾಗಿ 1971 ರಿಂದಲೇ ಕೇಂದ್ರ ಸರ್ಕಾರ ಅಭಿಯಾನವನ್ನು ಆರಂಭಿಸಿತು. ಇದಕ್ಕೆ ‘ಸ್ಪೀಪಲ್ ಚೇಸ್ ಅಭಿಯಾನ ಎಂದು ಹೆಸರಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಹಾಗೂ ವಿವಿಧ ರಾಜ್ಯಗಳ ಆರಕ್ಷಕರು ಜಂಟಿ ಕಾರ್ಯಾಚರಣೆ ನಡೆಸಿ 20,000 ಕ್ಕೂ ಹೆಚ್ಚಿನ ನಕ್ಸಲರನ್ನು ಹತ್ಯೆ ಮಾಡಿದರು. 2009 ರಲ್ಲಿ ಇದೇ ಉದ್ದೇಶಕ್ಕಾಗಿ ‘ಗ್ರೀನ್ ಹಂಟ್ ಅಭಿಯಾನ ಆರಂಭಿಸಿ ಛತ್ತೀಸಗಢ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸಲಾಯಿತು. 2010 ರಿಂದ, ಅದರಲ್ಲೂ ಮುಖ್ಯವಾಗಿ 2014 ರಿಂದ ನಕ್ಸಲರ ವಿರುದ್ಧದ ಕಾರ್ಯಾಚರಣೆ ಇನ್ನಷ್ಟು ಚುರುಕು ಪಡೆದುಕೊಂಡಿತು. ಹೀಗಾಗಿ ಭಾರತದಲ್ಲಿ ನಕ್ಸಕ್ ಮುಕ್ತ ಯೋಜನೆಗಳನ್ನು ಜಾರಿಗೆ ತರಲಾಯಿತು. ಅವುಗಳ ಹಾದಿ ಹೀಗಿದೆ..
* ಮೂಲಸೌಕರ್ಯಗಳ ಅಭಿವೃದ್ಧಿ
ನಕ್ಸಲರ ಮುಖ್ಯ ಅಡಗುತಾಣಗಳೆಂದ್ರೆ ದಟ್ಟ ಕಾಡುಗಳು. ಅಲ್ಲಿಗೆ ತಲುಪುವುದು ಇದುವರೆಗೆ ಕಷ್ಟಸಾಧ್ಯವಾಗಿತ್ತು. ಈಗ ನಕ್ಸಲ್ ಪೀಡಿತ ಹಲವಾರು ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು (12,000 ಕಿ.ಮೀ.ಗಿಂತ ಹೆಚ್ಚು) ನಿರ್ಮಾಣಗೊಂಡಿವೆ. ಹಾಗೆಯೇ ಮೊಬೈಲ್ ಟವರ್ (8,500ಕ್ಕೂ ಅಧಿಕ) ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ನಕ್ಸಲರ ಪತ್ತೆಗಾಗಿ ಡ್ರೋನ್ಗಳನ್ನೂ ಬಳಸಲಾಗುತ್ತಿದೆ. ಹಾಗಾಗಿ, ಅವರ ಅಡಗುತಾಣಗಳು ಈಗ ಸುರಕ್ಷಿತವಾಗಿಲ್ಲ.
* ಶಿಕ್ಷಣ
ನಕ್ಸಲರು ನೆಲೆಸಿರುವ ಕಾಡುಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಅಲ್ಲಿನ ಬುಡಕಟ್ಟು ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಬಿರುಸಿನಿಂದ ನಡೆಯುತ್ತಿವೆ. ನಕ್ಸಲ್ ಚಟುವಟಿಕೆಗಳ ದುಷ್ಪರಿಣಾಮಗಳ ಬಗ್ಗೆ ಅಲ್ಲಿನವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಹಾಗಾಗಿ ನಕ್ಸಲರಿಗೆ ಸ್ಥಳೀಯರ ಬೆಂಬಲ ಕಡಿಮೆಯಾಗುತ್ತಿದೆ.
* ರಕ್ಷಣಾಪಡೆಯ ಬಲವರ್ಧನೆ
ಸೈನಿಕರು, ಅರೆಸೈನಿಕರು, ಗೃಹರಕ್ಷಕರು, ಪೊಲೀಸರು, ಗುಪ್ತಚರರು ಮುಂತಾದವರನ್ನ ಒಳಗೊಂಡ ರಕ್ಷಣಾ ಪಡೆಯನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಲಿಷ್ಠಗೊಳಿಸಲಾಗಿದೆ. ಈ ಪಡೆಗಳಿಗೆ ಅತ್ಯಾಧುನಿಕ ಆಯುಧಗಳನ್ನು ಒದಗಿಸಲಾಗಿದೆ. ಈ ಉದ್ದೇಶಕ್ಕಾಗಿ ರಾಜ್ಯಗಳಿಗೆ ನೀಡುವ ಅನುದಾನವನ್ನ ಕೇಂದ್ರ ಸರ್ಕಾರ. ಗಣನೀಯವಾಗಿ ಹೆಚ್ಚಿಸಿದೆ.
* ನಿಧಿ ಸಂಗ್ರಹಕ್ಕೆ ತಡೆ
ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯೂ ಕೈಜೋಡಿಸಿದೆ. ನಕ್ಸಲರಿಗೆ ಹಣಕಾಸು ನೀಡುವವರನ್ನ ಗುರುತಿಸುವ ಮತ್ತು ನಿಧಿ ಸಂಗ್ರಹಕ್ಕೆ ತಡೆಯೊಡ್ಡುವ ಕಾರ್ಯವನ್ನ ಸರ್ಕಾರ ಚುರುಕುಗೊಳಿಸಿದೆ. ಇದರಿಂದಾಗಿ ನಕ್ಸಲ್ ಚಟುವಟಿಕೆಗೆ ಆರ್ಥಿಕ ಸಮಸ್ಯೆ ಎದುರಾಗಿದೆ.
* ಪುನರ್ವಸತಿ ಯೋಜನೆ
ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರು ಶರಣಾಗುವುದಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಮತ್ತು ಶರಣಾಗತರಿಗೆ ಸೂಕ್ತ ಪುನರ್ವಸತಿ ಯೋಜನೆ ಜಾರಿಗೊಳಿಸಲಾಗಿದೆ. ಅಂಥ ವ್ಯಕ್ತಿಗಳ ಕುಟುಂಬಕ್ಕೆ ಸೂಕ್ತ ಆರ್ಥಿಕ ಭದ್ರತೆಯನ್ನೂ ಒದಗಿಸಲಾಗುತ್ತಿದೆ.
* ನಕ್ಸಲ್ ಮುಖಂಡರ ಹತ್ಯೆ
ಶರಣಾಗತರಾಗದ ನಕ್ಸಲ್ ಮುಖಂಡರನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ. ನಂಬಾಲ ಕೇಶವ ರಾವ್ (ಬಸವರಾಜು), ಮಾದ್ವಿ ಹಿಡಮಾ, ಪ್ರತಾಪ ರೆಡ್ಡಿ, ಕಟ್ಟಾ ರಾಮಚಂದ್ರ ರೆಡ್ಡಿ, ಸತ್ಯನಾರಾಯಣ ರೆಡ್ಡಿ, ಗಜರಲಾ ರವಿ, ಸಹದೇವ ಸೊರೇನ್, ಬಾಲಕೃಷ್ಣ ಪ್ರಭಾಕರ ರಾವ್, ಸ್ವಾಮಿ ಸೇರಿದಂತೆ 30ಕ್ಕೂ ಹೆಚ್ಚು ನಕ್ಸಲ್ ಮುಖಂಡರನ್ನು ಗುಂಡಿಟ್ಟು ಕೊಲ್ಲಲಾಗಿದೆ. ನಕ್ಸಲರ ಸುಳಿವು ನೀಡಿದವರಿಗೆ ಬೃಹತ್ ಮೊತ್ತದ ಬಹುಮಾನ ಘೋಷಿಸಲಾಗಿದೆ.
ಭಾರತದಲ್ಲಿ ನಕ್ಸಲರ ಸ್ಥಿತಿಗತಿ
ಕೇಂದ್ರ ಸರ್ಕಾರವು ʻಭಾರತ ಈಗ ನಕ್ಸಲ್ ಮುಕ್ತ’ ಎಂದು ಘೋಷಿಸಿದೆ. ಹಾಗಿದ್ದರೆ, ಭಾರತದಲ್ಲಿ ಎಲ್ಲಿಯೂ ಈಗ ನಕ್ಸಲ್ ಚಟುವಟಿಕೆ ಅಥವಾ ವಾಮಪಂಥೀಯ ಉಗ್ರವಾದಿಗಳು ಇಲ್ಲವೇ ಎನ್ನುವ ಪ್ರಶ್ನೆ ಸಹಜ. ಆದರೆ, ಮಾವೋವಾದ ಈಗ ಭಾರತದಲ್ಲಿ ತುಂಬಾ ದುರ್ಬಲ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು. ದೇಶದಲ್ಲಿ ಹರಡಿದ್ದ ‘ಕೆಂಪು ಕಾರಿಡಾರ್’ ಬಹುತೇಕ ನಾಶವಾಗುವ ಹಂತವನ್ನು ತಲುಪಿದೆ.
2014 ರಲ್ಲಿ ಭಾರತದಲ್ಲಿ ನಕ್ಸಲ್ ಪೀಡಿತ 126 ಜಿಲ್ಲೆಗಳು ಇದ್ದವು. 2025ರಲ್ಲಿ ಈ ಸಂಖ್ಯೆ 11ಕ್ಕೆ ತಲುಪಿತು. 2024ರಲ್ಲಿ 2,000 ದಷ್ಟಿದ್ದ ಸಶಸ್ತ್ರ ಮಾವೋವಾದಿಗಳ ಸಂಖ್ಯೆ ಕೇವಲ 180 ಇಳಿದಿದೆ ಎಂದು ಗುಪ್ತಚರ ವರದಿಯೊಂದು ತಿಳಿಸಿದೆ. 2025ರಿಂದ ಜಾರಿಗೊಳಿಸಲಾದ ‘ಆಪರೇಷನ್ ಬ್ಲ್ಯಾಕ್ ಫಾರೆಸ್ಟ್’ ಬಹುತೇಕ ಯಶಸ್ವಿಯಾಗಿದೆ. ಕಳೆದ ಮೂರ್ನಾಲ್ಕು ದಶಕಗಳಿಂದ ನಕ್ಸಲರ ಪ್ರಮುಖ ಕೇಂದ್ರಗಳಾದ ಬೂಡಾ ಪಹಾಡ್, ಪಾರಸನಾಥ, ಬರಮಸಿಯಾ, ಚಕರಬಂಧಾ ಮುಂತಾದುವುಗಳು ನಕ್ಸಲ್ ಮುಕ್ತವಾಗಿವೆ. ಹಾಗಿದ್ದರೆ, ಭಾರತ ಈಗ ಸಂಪೂರ್ಣ ನಕ್ಸಲ್ ಮುಕ್ತವೇ? ನಕ್ಸಲ್ ವಾದಿಗಳು ಈಗ ದೇಶದಲ್ಲಿ ಯಾರೂ ಇಲ್ಲವೇ? ಅಂಥ ಸ್ಥಿತಿ ನಿರ್ಮಾಣಕ್ಕೆ ಇನ್ನೂ ಸ್ವಲ್ಪ ಕಾಲ ಕಾಯಬೇಕಿದೆ.
ಕರ್ನಾಟಕದಲ್ಲಿ ನಕ್ಸಲ್ ಇತಿಹಾಸದ ಕೊನೆಯ ಮೊಳೆ?
80 ರ ದಶಕದಿಂದ ರಾಜ್ಯದಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸಿದ್ದ ನಕ್ಸಲರು ಪೂರ್ಣಪ್ರಮಾಣದಲ್ಲಿ ಶರಣಾಗಿದ್ದಾರೆ. ಅದು ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಒಳಗೊಂಡ ತಂಡ ಸಿಎಂ ಸಿದ್ದರಾಮಯ್ಯ ಮುಂದೆ ಕಳೆದ ವರ್ಷಾರಂಭದಲ್ಲಿ ಶರಣಾಗುವುದರೊಂದಿಗೆ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಹೇಳಲಾಗುತ್ತಿದೆ. ಮುಂಡಗಾರು ಲತಾ, ಮಾರೆಪ್ಪಾ ಅರೋಲಿ ಆಲಿಯಾನ್ ಜಯಣ್ಣ ಯಾನೆ ಜಾನ್, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ವಸಂತ್ ಟಿ.ಎನ್ ಹಾಗೂ ಜಿಶಾ ಶರಣಾಗಿದ್ದಾರೆ. ಆದರೆ ಇಲ್ಲಿಗೆ ಕರ್ನಾಟಕದ ನಕ್ಸಲ್ ಚಳವಳಿ ಅಂತ್ಯಗೊಳ್ಳುತ್ತಾ? ಎಂಬುವುದು ಪ್ರಶ್ನೆಯಾಗಿದೆ.

