ಬೆಂಗಳೂರು: ಕರ್ನಾಟಕ ತಮಿಳುನಾಡಿನಲ್ಲಿ ಎಂಟು ಜನರನ್ನು ಬಲಿ ಪಡೆದಿದ್ದ ನರಹಂತಕ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಕುಮ್ಕಿ ಆನೆಗಳ ಸಹಾಯದೊಂದಿಗೆ ಕೊನೆಗೆ ಸೆರೆಹಿಡಿದಿದ್ದಾರೆ.
ಈ ಆನೆಯು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅರಣ್ಯ ಪ್ರದೇಶದ ಕಾಡಂಚಿನಲ್ಲಿ ಹಾವಳಿ ಇಡುತ್ತ ಇಬ್ಬರನ್ನು ಬಲಿಪಡೆದಿತ್ತು. ತಮಿಳುನಾಡಿನ ಅರಣದಲ್ಲಿ ಬಿಡು ಬಿಟ್ಟು ಹೊಸೂರು ಸುತ್ತಮುತ್ತ ಕಾದಂಚಿನ ಗ್ರಾಮಗಳಿಗೆ ನುಗ್ಗಿ ಬೆಳೆ ನಾಶ ಮಾಡಿತ್ತು. ಅಷ್ಟೇ ಅಲ್ಲದೇ ಅಲ್ಲಿಯೂ 6 ಜನರನ್ನು ಬಲಿ ಪಡೆದು ಜನರಲ್ಲಿ ಆತಂಕ ಮೂಡಿಸಿತ್ತು.
ನರಹಂತಕ ಒಂಟಿ ಸಲಗ ಸೆರೆಗಾಗಿ ತಮಿಳುನಾಡು ಅರಣ್ಯ ಸಿಬ್ಬಂದಿ ಕುಮ್ಕಿ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿತ್ತು. ಪ್ಯಾರಾಂಡಪಲ್ಲಿ ಅರಣ್ಯ ಪ್ರದೇಶದಲ್ಲಿ ಒಂಟಿಸಲಗವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಸಿಬ್ಬಂದಿ, ಅರವಳಿಕೆ ನೀಡುವ ಮೂಲಕ ಸೆರೆ ಹಿಡಿದಿದ್ದಾರೆ. ಬಳಿಕ ಲಾರಿ ಹತ್ತಲು ನಿರಾಕರಿಸಿದ್ದ ಸಲಗವನ್ನು ಕುಮ್ಕಿ ಆನೆಗಳು ಬಲವಂತವಾಗಿ ನುಕುವ ಮೂಲಕ ಲಾರಿಗೆ ದೂಡಿದವು.
ಇದೇ ಒಂಟಿ ಸಲಗವನ್ನು ಕಳೆದ ವರ್ಷ ಬನ್ನೇರುಘಟ್ಟ ಸಿಬ್ಬಂದಿಯ ಸಹಾಯದೊಂದಿಗೆ ತಮಿಳುನಾಡು ಅರಣ್ಯ ಇಲಾಖೆ ಹಿಡಿದು ಹೊಗೇನೇಕಲ್ ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿದ್ದರು. ಆದರೆ ಸಲಗ ಹಳ್ಳಿಗಳಲ್ಲಿ ಸುಲಭವಾಗಿ ಸಿಗುವ ಆಹಾರದ ಮೇಲೆ ಕಣ್ಣಿಟ್ಟು ಮತ್ತೆ ಇತ್ತ ಮುಖ ಮಾಡಿ 8 ಜನರನ್ನು ತುಳಿದು ಸಾಯಿಸಿತ್ತು. ಇದರಿಂದಾಗಿ ಅರಣ್ಯದಂಚಿನ ಗ್ರಾಮಸ್ಥರು ಆನೆಯನ್ನು ಹಿಡಿಯುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಇದರ ಫಲವಾಗಿ ಇಂದು ತಮಿಳುನಾಡು ಅರಣ್ಯ ಇಲಾಖೆ ಸಲಗವನ್ನು ಹಿಡಿದಿದ್ದು ಮತ್ತೊಮ್ಮೆ ದೂರದ ಕಾಡಿನಲ್ಲಿ ಬಿಟ್ಟುಬರಲು ಒಯ್ದಿದ್ದೆ.