ಕೊಪ್ಪಳ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಎರಡು ಪಕ್ಷದ ನಾಯಕರುಗಳು ಒಬ್ಬೊಬ್ಬರ ಮೇಲೆ ಮಾತನಾಡುವ ಮೂಲಕ ಟಾಕ್ ಫೈಟ್ ನಡೆಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಸಹೋದರ ರಾಘವೇಂದ್ರ ಹಿಟ್ನಾಳ್ ನಡುವೆ ಇದೀಗ ಟಾಕ್ ಫೈಟ್ ಎರ್ಪಟ್ಟಿದೆ. ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಂಗಣ್ಣ ಕರಡಿ ತಮ್ಮ ಭಾಷಣದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರೂಫ್ ಕೇಳುವ ರಾಘವೇಂದ್ರ ಹಿಟ್ನಾಳ್ ಇಲ್ಲಿರುವುದಕ್ಕೆ ಯೋಗ್ಯರಲ್ಲಾ ಅವರು ಪಾಕಿಸ್ತಾನಕ್ಕೆ ಹೋಗಲಿ. ರಾಘವೇಂದ್ರ ಹಿಟ್ನಾಳ್ ಒಬ್ಬ ಅಯೋಗ್ಯ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಘವೇಂದ್ರ ಹಿಟ್ನಾಳ್ ಕರಡಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಸಂಗಣ್ಣ ಕರಡಿ ಮಾನಸಿಕ ಅಸ್ವಸ್ಥ ಕಳೆದುಕೊಂಡಿದ್ದಾರೆ. ಮೊನ್ನೆ ನಡೆದ ಕಾಂಗ್ರೆಸ್ ಸಮಾವೇಶ ನೋಡಿ ವಿಚಲಿತರಾಗಿದ್ದಾರೆ. ನಮಗೆ ದೇಶಾಭಿಮಾನದ ಬಗ್ಗೆ ಪಾಠ ಮಾಡೋದು ಅವಶ್ಯವಿಲ್ಲ. ಬಿಜೆಪಿಯವರಿಗೆ ಹಿಂದೂತ್ವ, ಹಿಂದೂ ಸಂಪ್ರದಾಯದ ಬಗ್ಗೆ ಗೊತ್ತೆ ಇಲ್ಲ. ಅವರಿಗೆ ಜನರಿಂದ ಸ್ಪಂದನೆ ಸಿಗುತ್ತಿಲ್ಲ, ಹಾಗಾಗಿ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಜೊತೆಗೆ ಕೂಡಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮಾಡುತ್ತಿದ್ದಾರೆ ಎಂದು ಕರಡಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಇವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಯಾರು ಯೋಗ್ಯ ಇದ್ದಾರೆ, ಯಾರು ಯೋಗ್ಯರಿಲ್ಲ ಎನ್ನುವುದನ್ನು ಜನತೆ ನಿರ್ಧರಿಸುತ್ತಾರೆ. ಅವರು ಮಾತನಾಡಿರುವುದನ್ನು ನೋಡಿದರೆ ಅವರು ಮಾನಸಿಕವಾಗಿ ಕುಗ್ಗಿರುವುದು ಸ್ಪಷ್ಟವಾಗುತ್ತದೆ. ಅವರ ಮಾತಿನಲ್ಲಿ ಸೋಲಿನ ಭಯ ಕಾಡುತ್ತಿದೆ. ಹೇಗಾದರೂ ಮಾಡಿ ಜಾತಿ-ಜಾತಿಗಳ ಮದ್ಯೆ ಜಗಳ ಹಚ್ಚಿ ಗೆಲ್ಲಲು ಹೊರಟಿದ್ದಾರೆ. ಇದು ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ ಎಂದು ಸಂಗಣ್ಣ ಕರಡಿ ಹೇಳಿಕೆಗೆ ರಾಘವೇಂದ್ರ ಹಿಟ್ನಾಳ್ ತಿರುಗೇಟು ನೀಡಿದರು.