ನವದೆಹಲಿ: ಚುನಾವಣಾ ಆಯೋಗ (Election Commission) ಕೇಂದ್ರದ ಹಿಡಿತದಲ್ಲಿದೆ. ಆಯುಕ್ತರ ನೇಮಕಾತಿ ಸರಿಯಿಲ್ಲ ಎಂದು ನಿನ್ನೆಯಷ್ಟೇ ಸುಪ್ರೀಂಕೋರ್ಟ್ (Supreme Court) ಚಾಟಿ ಬೀಸಿತ್ತು. ಇದ್ರ ಮುಂದುವರಿದ ಭಾಗವಾಗಿ ಇಂದು ಕೂಡ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ (Arun Goel) ನೇಮಕಾತಿ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿ, ಕೇಂದ್ರದ ಧೋರಣೆ ಬಗ್ಗೆ ಅಸಹನೆ ವ್ಯಕ್ತಪಡಿಸಿದೆ.
ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್ರನ್ನು ಏಕೆ ನೇಮಕ ಮಾಡಿದ್ರಿ ಎಂದು ಪ್ರಶ್ನಿಸಿದೆ. ಅರುಣ್ ಗೋಯೆಲ್ ವಿಆರ್ಎಸ್ ಪಡೆದು 24 ಗಂಟೆ ಕಳೆಯುವುದಕ್ಕೆ ಮೊದಲೇ ತರಾತುರಿಯಲ್ಲಿ ಅರುಣ್ ಗೋಯೆಲ್ ನೇಮಕವನ್ನು ಹೇಗೆ ಪೂರ್ಣಗೊಳಿಸಲಾಯ್ತು ಎಂದು ಸಾಂವಿಧಾನಿಕ ಪೀಠ ಆಶ್ಚರ್ಯ ವ್ಯಕ್ತಪಡಿಸಿದೆ. ಚುನಾವಣಾ ಮುಖ್ಯ ಆಯುಕ್ತರು, ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆಯನ್ನು ಏರ್ಪಾಟು ಮಾಡುವಂತೆ ದಾಖಲಾದ ಅರ್ಜಿಗಳ ವಿಚಾರಣೆ ವೇಳೆ, ಗೋಯೆಲ್ ನೇಮಕ ಸಂಬಂಧ ಕೇಂದ್ರ ಸಲ್ಲಿಸಿದ ವರದಿ ಪರಿಶೀಲಿಸಿ ಹಲವು ಪ್ರಶ್ನೆ ಎತ್ತಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಕೊಲೆ ಪ್ರಕರಣ ಲವ್ ಜಿಹಾದ್ ಅಲ್ಲ – ಅಸಾದುದ್ದೀನ್ ಓವೈಸಿ
ಈ ಸಂದರ್ಭದಲ್ಲಿ, ನೀವು ಸ್ವಲ್ಪ ಸುಮ್ಮನಿರ್ತೀರಾ ಎಂದು ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ಹೇಳಿದ ಘಟನೆಯೂ ನಡೆದಿದೆ. ನಾಲ್ಕು ದಿನಗಳ ಸುಧೀರ್ಘ ವಿಚಾರಣೆ ಮುಗಿದಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಸುಪ್ರೀಂ ಪೀಠದ ಪ್ರಶ್ನೆಗಳ ಸುರಿಮಳೆ:
ಆಯುಕ್ತರ ಹುದ್ದೆ ಮೇ 15ರಿಂದ ಖಾಲಿ ಇದೆ. ಇಲ್ಲಿ ಅರ್ಜಿವಾದ ಶುರುವಾದ ಕೂಡಲೇ ನೇಮಕಾತಿ ನಡೆದಿದೆ. ಇದ್ಯಾವ ರೀತಿಯ ನೇಮಕ? ನಾವು ಗೋಯೆಲ್ ಸಾಮರ್ಥ್ಯ ಪ್ರಶ್ನಿಸ್ತಿಲ್ಲ. ಅರುಣ್ ಗೋಯೆಲ್ ನೇಮಕಾತಿಯ ಪ್ರಕ್ರಿಯೆ ಪ್ರಶ್ನಿಸುತ್ತಿದ್ದೇವೆ. ಗೋಯೆಲ್ ಕಡತವನ್ನು ಮಿಂಚಿನ ವೇಗದಲ್ಲಿ ಕ್ಲಿಯರ್ ಮಾಡಿದ್ದೇಗೆ? ಅರುಣ್ ಗೋಯೆಲ್ ಫೈಲ್ ಬಂದ ದಿನವೇ ನೇಮಕಾತಿ ಹೇಗೆ ಆಯ್ತು? ಇ.ಸಿ ಹುದ್ದೆಗಾಗಿ ನಾಲ್ವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಈ ಕಡತವನ್ನು ಕಾನೂನು ಇಲಾಖೆ ನ.18 ರಂದು ಪಿಎಂಓಗೆ ಕಳಿಸಿತ್ತು. ಅದೇ ದಿನ ಪ್ರಧಾನಮಂತ್ರಿಗಳು ಒಂದು ಹೆಸರನ್ನು ಪ್ರತಿಪಾದಿಸಿದರು. ನಾಲ್ವರಲ್ಲಿ ಕಿರಿಯರಾದ ಗೋಯೆಲ್ ಹೆಸರನ್ನು ಯಾವ ಆಧಾರದ ಮೇಲೆ ಫೈನಲ್ ಮಾಡಿದ್ದೀರಿ. ಗೋಯೆಲ್ ಸಾಮರ್ಥ್ಯವನ್ನು ಯಾವ ರೀತಿ ಮೌಲ್ಯಮಾಪನ ಮಾಡಿದ್ದೀರಿ. ಇದಕ್ಕೆ ಅನುಸರಿಸಿದ ಪದ್ದತಿ ಏನು ಎಂದು ಚಾಟಿ ಬೀಸಿತು. ಇದನ್ನೂ ಓದಿ: ಸೆನ್ಸೆಕ್ಸ್ ಹೈಜಂಪ್ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ
ಅಟಾರ್ನಿ ಜನರಲ್ ವಾದ ಏನು?
ದಯವಿಟ್ಟು ನೀವು ಕೆಲ ಕಾಲ ಸುಮ್ಮನಿರಿ. ಚುನಾವಣಾ ಆಯುಕ್ತರ ನೇಮಕದಲ್ಲಿ ತಪ್ಪು ನಡೆದಿಲ್ಲ. ಈ ಹಿಂದೆಯೂ 12 ರಿಂದ 24 ಗಂಟೆಯಲ್ಲಿ ನೇಮಕಾತಿ ಆಗಿದೆ. ಕಾನೂನು ಇಲಾಖೆ ಪ್ರತಿಪಾದಿಸಿದ 4 ಹೆಸರುಗಳನ್ನು ಡಿಓಪಿಟಿ ಡೇಟಾ ಬೇಸ್ನಿಂದಲೇ ತೆಗೆದುಕೊಳ್ಳಲಾಗಿದೆ. ಈ ವಿವರಗಳೆಲ್ಲಾ ಬಹಿರಂಗವಾಗಿ ಎಲ್ಲರಿಗೂ ಲಭ್ಯ ಆಗುವಂತಿವೆ. ನೇಮಕ ವೇಳೆ ಸೀನಿಯಾರಿಟಿ, ನಿವೃತ್ತಿ ವಯಸ್ಸು ಪರಿಗಣಿಸಲಾಗುತ್ತದೆ. ವಯಸ್ಸಿಗೆ ಬದಲಾಗಿ ಬ್ಯಾಚ್ ಆಧಾರವಾಗಿ ಸೀನಿಯಾರಿಟಿ ಪರಿಗಣಿಸಲಾಗಿದೆ. ಸಣ್ಣ ಸಣ್ಣ ವಿಚಾರಗಳನ್ನು ಕೂಡ ಸುಪ್ರೀಂ ಗಮನಿಸುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ನೇಮಕಾತಿ ವಿಚಾರದಲ್ಲಿ ಎಲ್ಲಾ ಅಂಶಗಳನ್ನು ಸುಪ್ರೀಂ ಪರಿಶೀಲಿಸಬೇಕು ಎಂದು ವಾದ ಮಂಡಿಸಿದರು.