ಬೆಂಗಳೂರು: ಯಾರು ನಾಟಕ ಮಾಡುತ್ತಾರೆ ಅನ್ನೋದು ಮಂಡ್ಯ ಜನತೆಗೆ ಗೊತ್ತಾಗುತ್ತದೆ. ನನ್ನ ಹೆಸರನ್ನು ಒಂದು ದಿನ ಹೇಳದೇ ಜೆಡಿಎಸ್ ಪ್ರಚಾರ ನಡೆಯುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಚಿವ ಪುಟ್ಟರಾಜು ಅವರು ನನ್ನನ್ನು ದೊಡ್ಡ ಸ್ಥಾನದಲ್ಲಿ ಕೂರಿಸುತ್ತಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು, ಅವರು ಮಾಹಿತಿ ಪಡೆದು ಮೂರು ತಿಂಗಳು ನಂತರ ಐಟಿ ರೇಡ್ ಮಾಡುತ್ತಾರೆ. ನಾನು ಬಿಜೆಪಿ ಅಭ್ಯರ್ಥಿಯಲ್ಲ. ಐಟಿ ಅಧಿಕಾರಿಗಳು ಹಣ ಹಂಚಿಕೆ ಎಲ್ಲಿ ಅಧಿಕವಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡುತ್ತಾರೆ ಎಂದು ಹೇಳಿದರು.
ಜನತದಳದ ನಾಯಕರು ದಿನ ಬೆಳಗ್ಗೆ ಎದ್ದು ದೇವರ ಹೆಸರು ಹೇಳುತ್ತಾರೋ ಗೊತ್ತಿಲ್ಲ. ಆದರೆ ನನ್ನ ಹೆಸರನ್ನು ಹೇಳುತ್ತಾರೆ. ಅವರ ಹೇಳಿಕೆಯ ಬಗ್ಗೆ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇವತ್ತಿನಿಂದ ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಪ್ರಚಾರ ಎಂದರೆ ಏನು ಎಂಬುದನ್ನು ನಾನು ತೋರಿಸುತ್ತೇನೆ ಎಂದು ಪುಟ್ಟರಾಜು ಅವರು ಹೇಳಿದ್ದರು. ಅವರ ಮಾತಿಗೆ, ಇಂತಹ ಬೆದರಿಕೆಗೆ ನಾನು ಹೆದರಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ. ಅವರ ಕೆಲಸ ಅವರು ಮಾಡಿಕೊಳ್ಳಲಿ. ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡದೇ ಸುಮ್ಮನೆ ಮಾತನಾಡುತ್ತಾರೆ ಎಂದು ಸುಮಲತಾ ಅವರು ಪುಟ್ಟರಾಜು ಅವರಿಗೆ ತಿರುಗೇಟು ಕೊಟ್ಟಿದ್ದಾರೆ.