ಹುಬ್ಬಳ್ಳಿ/ಬೆಳಗಾವಿ: ಹುಬ್ಬಳ್ಳಿಯಲ್ಲಿ (Hubballi) ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremut) ಭೀಕರ ಹತ್ಯೆ ಪ್ರಕರಣ ಸಂಬಂಧ ಹಿಂದೂಪರ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ. ನೂರಾರು ಕಾರ್ಯಕರ್ತರು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ನೇಹಾಳನ್ನ ಕೊಂದ ಆರೋಪಿಯನ್ನು ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸಿವೆ.
ಅಲ್ಲದೇ ನೇಹಾಳ ಕೊಲೆ ಖಂಡಿಸಿ ಎನ್ಎಸ್ಯುಐ (NSUI) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮಾಡಿದೆ. ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಕೊಲೆ ಆರೋಪಿಗಳನ್ನ ಗಲ್ಲಿಗೇರಿಸುವಂತೆ ಒತ್ತಾಯಿಸಿದೆ. ಇಂದು ಸಹ ಪ್ರತಿಭಟನೆ ಮುಂದುವರಿದಿದೆ. ಇದನ್ನೂ ಓದಿ: ರಾಣಿ ತರಹ ನೋಡಿಕೊಳ್ತಿದ್ವಿ, ಪ್ರತಿದಿನ ಕಾರಿನಲ್ಲೇ ಕಾಲೇಜಿಗೆ ಕಳಿಸ್ತಿದ್ವಿ – ಮಗಳ ಸಾವು ನೆನೆದು ತಂದೆ-ತಾಯಿ ಅಳಲು!
ಮೃತದೇಹ 3 ಕಿಮೀ ಮೆರೆವಣಿಗೆ:
ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ನೇಹಾಳ ಮೃತದೇಹ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬಳಿಕ ಕುಟುಂಬಸ್ಥರಿಗೆ ಮೃಹದೇಹ ಹಸ್ತಾಂತರಿಸಲಾಗುತ್ತದೆ. ಅಲ್ಲಿಂದ ಸುಮಾರು 3 ಕಿಲೋಮೀಟರ್ ಪಾರ್ಥಿವ ಶರೀರವನ್ನು ಮೆರವಣಿಗೆ ನಡೆಸಲಿದ್ದು, ವೀರಶೈವ ಜಂಗಮ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್
ವಿದ್ಯಾರ್ಥಿ ಸಂಘಟನೆಗಳಿಂದ ಬೃಹತ್ ಹೋರಾಟ:
ನೇಹಾಳ ಹತ್ಯೆ ಖಂಡಿಸಿ, ಹಿಂದೂಪರ ಮತ್ತು ವಿದ್ಯಾರ್ಥಿ ಸಂಘಟನೆಗಳಿಂದ ಇಂದು (ಏ.19) ಬೃಹತ್ ಪ್ರತಿಭಟನೆ (Protest) ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಎಬಿವಿಪಿಯಿಂದ ಮಹಾನಗರ ವ್ಯಾಪ್ತಿಯ ಕಾಲೇಜು ಬಂದ್ಗೆ ಕರೆ ನೀಡಲಾಗಿದೆ. ಹಿಂದೂ ಜಾಗರಣ ವೇದಿಕೆ, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದು, ನಗರದಲ್ಲೆಡೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ:
ಇನ್ನೂ ವಿದ್ಯಾರ್ಥಿನಿ ನೇಹಾಳ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿಕೊಳ್ಳಲಾಗಿದೆ. ಇಲ್ಲಿನ ಸವದತ್ತಿಯ ಎಪಿಎಂಸಿ ಹತ್ತಿರ ಇರುವ ಚೆನ್ನಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಶುರುವಾಗಲಿದೆ. ಇದನ್ನೂ ಓದಿ: ನೇಹಾ ಹಿರೇಮಠ ಕೊಲೆಗೆ ಕಾರಣವೇನು?- ಪೊಲೀಸರ ಮುಂದೆ ಆರೋಪಿ ಹೇಳಿದ್ದೇನು?