– ಬೇರೆಯವರಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ
ಹುಬ್ಬಳ್ಳಿ: ರೈಲಿನಲ್ಲಿ ಊರಿಗೆ ತೆರಳುತ್ತಿದ್ದ ವಿದ್ಯಾರ್ಥಿಯ ಬಳಿ ಕರೆ ಮಾಡಲು ಮೊಬೈಲ್ ಪಡೆದು, ಬಳಿಕ ಆತನಿಗೇ ಹಲ್ಲೆ ಮಾಡಿ ಕಳ್ಳ ಫೋನ್ ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.
ಕರೆ ಮಾಡಿ ಮಾತನಾಡುವ ನೆಪದಲ್ಲಿ ಮೊಬೈಲ್ ತಗೆದುಕೊಂಡು ನಂತರ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಕಳ್ಳ, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಧಾರವಾಡದ ಜೆಎಸ್ ಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶಂಕರ್ ಮಹಾಜನಶೆಟ್ಟರ್ ಇಂದು ಕಾಲೇಜು ಮುಗಿಸಿ, ಲಕ್ಷ್ಮೇಶ್ವರಕ್ಕೆ ತೆರಳಲು ಹುಬ್ಬಳ್ಳಿಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬೇರೆಯವರಿಗೆ ತುರ್ತಾಗಿ ಫೋನ್ ಮಾಡುವುದಾಗಿ ಮೊಬೈಲ್ ತಗೆದುಕೊಂಡಿದ್ದಾನೆ. ಇದನ್ನೂ ಓದಿ: ನೀರು ಮಿಕ್ಸ್ ಮಾಡಿ ಪೆಟ್ರೋಲ್, ಡೀಸೆಲ್ ಮಾರಾಟ – ರೊಚ್ಚಿಗೆದ್ದ ಜನ
ಮೊಬೈಲ್ ಪಡೆದ ವ್ಯಕ್ತಿ ಬೇರೆಯವರಿಗೆ ಕರೆ ಮಾಡುತ್ತ ರೈಲ್ವೆ ನಿಲ್ದಾಣದಿಂದ ಹೊರಗಡೆ ಆಗಮಿಸಿ, ಪರಾರಿಯಾಗಲು ಯತ್ನಿಸಿದ. ಈ ವೇಳೆ ವಿದ್ಯಾರ್ಥಿ ಶಂಕರ್ ಮೊಬೈಲ್ ಕಳ್ಳನ ಬೆನ್ನಹತ್ತಿದ್ದ ನಂತರ ಕಳ್ಳ ವಿದ್ಯಾರ್ಥಿಯ ತೆಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಘಟನೆಯ ನಂತರ ಹಲ್ಲೆಗೆ ಒಳಗಾದ ವಿದ್ಯಾರ್ಥಿಗೆ ಸ್ಥಳೀಯರು ಸಹಾಯ ಮಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿದ್ಯಾರ್ಥಿ ಬಳಿ ಮಾಹಿತಿ ಪಡೆದು ಮೊಬೈಲ್ ಕಳ್ಳನಿಗೆ ಬಲೆ ಬೀಸಿದ್ದಾರೆ.