ಕಾರವಾರ: ಬಹುತೇಕ ಅರಣ್ಯವನ್ನೇ ಹೊಂದಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಕಾಟಕ್ಕಿಂತ ಬೀದಿ ನಾಯಿಗಳ ಉಪಟಳವೇ ಹೆಚ್ಚಾಗಿದೆ. ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ ಆರು ಸಾವಿರದ ಐನೂರಕ್ಕೂ ಹೆಚ್ಚು ಜನ ನಾಯಿಗಳಿಂದ ಕಚ್ಚಿಸಿಕೊಂಡಿದ್ದು, ಇದೀಗ ಬೀದಿನಾಯಿಗಳಿಗೆ ಜನರು ಭಯಪಡುವಂತಾಗಿದೆ.
ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರದಲ್ಲಿ ಬೀದಿನಾಯಿಗಳ ದಾಳಿಯಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ಬಹುತೇಕ ಅರಣ್ಯವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡುಪ್ರಾಣಿಗಳಿಗಿಂತ ನಾಯಿಗಳ ದಾಳಿಗೆ ಒಳಗಾದವರೇ ಹೆಚ್ಚಾಗುತಿದ್ದಾರೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೀದಿ ನಾಯಿ (Street Dogs) ಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ರಸ್ತೆಯಲ್ಲಿ ಸಂಚರಿಸುವ ಜನ, ವಾಹನಗಳ ಮೇಲೆ ಬೀದಿ ನಾಯಿಗಳು ಮುಗಿಬೀಳುತ್ತಿವೆ. ಈ ವರ್ಷದಲ್ಲೇ ಬರೋಬ್ಬರಿ 6,533 ಜನರು ನಾಯಿಯ ದಾಳಿಗೆ ಒಳಗಾಗಿದ್ದಾರೆ. ಆದರೆ ಕಾಡು ಪ್ರಾಣಿಗಳಿಂದ ದಾಳಿಗೊಳಗಾದ ಪ್ರಕರಣಗಳು 349 ಮಾತ್ರ ದಾಖಲಾಗಿದೆ. ಹೀಗಾಗಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವಂತೆ ಜಿಲ್ಲಾಡಳಿತವನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆ (Department of Animal Husbandry) ಮಾಹಿತಿಯಂತೆ 7 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿವೆ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿವೆ. ಜಿಲ್ಲೆಯ ಕೆಲವೆಡೆ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ. ಹಳಿಯಾಳ ಪುರಸಭೆಯಲ್ಲಿ ಮಾತ್ರ ನಾಯಿಗಳ ಸಂತಾನ ಶಕ್ತಿ ಹರಣ ಮಾಡುವ ಬದಲು, ನೂರಾರು ನಾಯಿಗಳನ್ನು ಹಿಡಿದು ಕಾಡಿನಲ್ಲಿ ಬಿಟ್ಟು ಬರಲಾಗುತ್ತಿದೆ. ಹೀಗಾಗಿ ಪ್ರಾಣಿದಯಾ ಸಂಘ (Animal Welfare Association) ದವರು ಸಹ ನಿಯಮ ಬಾಹಿರವಾಗಿ ಬೀದಿನಾಯಿಗಳನ್ನು ಹಿಡಿದು ಕಾಡಿಗೆ ಬಿಡುತ್ತಿರುವ ಕುರಿತು ದೂರು ಸಹ ದಾಖಲಿಸಿದ್ದು, ಜಿಲ್ಲಾಡಳಿತ ಇದೀಗ ನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ.
ಸದ್ಯ ಜಿಲ್ಲೆಯಲ್ಲಿ ನಾಯಿಗಳ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ನಿಯಮದ ಪ್ರಕಾರ ನಡೆದುಕೊಳ್ಳಬೇಕಿದ್ದ ಸ್ಥಳೀಯ ಆಡಳಿತ ನಾಯಿಗಳನ್ನು ಹಿಡಿದು ಕಾಡಿಗೆ ಬಿಡುತ್ತಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದ್ದು, ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಣ ಮಾಡುವಂತೆ ಜನರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನಕ್ಕೆ ಬಡಿದ ಪಕ್ಷಿ – ಕಣ್ಣೂರಿನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್