ಬೆಂಗಳೂರು: ಐದು ಕ್ರಷರ್ ಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ನೆಲಮಂಗಲ ತಾಲೂಕಿನ ಗ್ರಾಮದ ಜನ ತತ್ತರಿಸಿ ಹೋಗಿದ್ದಾರೆ. ಮಾಲೀಕರ ದುರಾಸೆಯಿಂದ ನಿರ್ಮಾಣವಾಗಿರುವ ಐದು ಕಲ್ಲುಗಾಣಿಗಾರಿಕೆ ತಾಣಗಳಿಂದ, ಕ್ರಷರ್ಗೆ ಹೊಂದಿಕೊಂಡಿರುವ ಗ್ರಾಮದ ಜನರ ಬದುಕು ಹೇಳತೀರದಾಗಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಗಡಿಯಂಚಿನಲ್ಲಿರುವ ಮಾಕೇನಹಳ್ಳಿಯ ಗ್ರಾಮಸ್ಥರು, ಪ್ರತಿನಿತ್ಯ ಗಣಿಗಾರಿಕೆಯ ಸ್ಫೋಟದ ಭಯಾನಕ ಶಬ್ಧ ಹಾಗೂ ಧೂಳಿನಿಂದ ಭಯಭೀತರಾಗಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಗ್ರಾಮದಲ್ಲಿನ ನೂರಾರು ಮನೆಗಳು ಸಹ ವಿಪರೀತ ಬಿರುಕು ಬಿಟ್ಟಿವೆ. ಯಾವಾಗ ಮನೆ ಬೀಳುತ್ತದೆಯೋ ಎಂಬ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ನಿತ್ಯ ನೂರಾರು ಲಾರಿಗಳಲ್ಲಿ ಕಲ್ಲಿನ ಉತ್ಪನ್ನಗಳಾದ ಜಲ್ಲಿ, ಎಂ.ಸ್ಯಾಂಡ್, ಇನ್ನಿತರ ಕಲ್ಲಿನ ಉತ್ಪನ್ನಗಳನ್ನು ಸಾಗಿಸಲು ಬೆಟ್ಟದಂತಿರುವ ಕಲ್ಲು ಬಂಡೆಯನ್ನು ಕರಗಿಸುತ್ತಿದ್ದಾರೆ. ಹರ್ಷ, ಸೂರ್ಯ, ವಿನಾಯಕ, ಎಸ್.ಎಲ್.ಎನ್, ಎಸ್.ಎಲ್.ಆರ್ ಎಂಬ ಕಂಪನಿಗಳ ಗಣಿಗಾರಿಕೆ ಜೋರಾಗಿದೆ. ಈ ಗಣಿಗಾರಿಕೆಯಿಂದ ಮಾಕೇನಹಳ್ಳಿ ಗ್ರಾಮದ ನೂರಾರು ಮನೆಗಳೆಲ್ಲ ಬಿರುಕು ಬಿಟ್ಟಿದ್ದು, ಮನೆ ಬೀಳುವ ಭಯದಲ್ಲೇ ಗ್ರಾಮಸ್ಥರು ಬದುಕು ಸಾಗಿಸುತ್ತಿದ್ದಾರೆ.
ಮನೆಯ ಗೋಡೆಗಳು ಸಂಪೂರ್ಣ ಹಾಳಾಗುವ ಪರಿಸ್ಥಿತಿಗೆ ಬಂದು ತಲುಪಿದ್ದು, ಇನ್ನೊಂದೆಡೆ ಕಲ್ಲು ಗಣಿಗಾರಿಕೆಯ ವಿಪರೀತ ಶಬ್ದದಿಂದ ರಾತ್ರಿ ವೇಳೆ ಮಲಗಲು ಸಾಧ್ಯವಾಗದೇ, ಬಾಣಂತಿ, ಚಿಕ್ಕಮಕ್ಕಳು ನಿದ್ರೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮ ಪಂಚಾಯತಿಯಿಂದ ಹಿಡಿದು ಮೇಲ್ಮಟ್ಟದ ಆಡಳಿತ ವ್ಯವಸ್ಥೆಯವರೆಗೆ ಎಲ್ಲ ಜನಪ್ರತಿನಿಧಿಗಳು ಕ್ರಷರ್ಗಳಿಂದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ರಾಶಿಗಟ್ಟಲೇ ಲಾರಿ ಲೋಡ್ಗಳಲ್ಲಿ ಸಾಗಿಸುವ ಜಲ್ಲಿ, ಎಂ.ಸ್ಯಾಂಡ್ಗಳಿಗೆ ರಾಜಕಾರಣಿಗಳೇ ಶ್ರೀ ರಕ್ಷೆಯಾಗಿದ್ದಾರೆ ಎಂದು ಮಾಕೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೆಪ ಮಾತ್ರಕ್ಕೆ ಕಾಣದ ಮರದ ಕೆಳಗೆ ಕುಳಿತು ಜಾಣ ಮೌನದಲ್ಲಿ ತೊಡಗಿರುವುದು ಅನುಮಾನ ಮೂಡಿಸಿದೆ.