ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಡಾ. ನ. ವಜ್ರಕುಮಾರ ಇಂದು ಬೆಳಗ್ಗಿನ ಜಾವ ಧಾರವಾಡದ ನಿವಾಸದಲ್ಲಿ ನಿಧನ ಹೊಂದಿದರು.
ಧಾರವಾಡ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಯೂ ಆಗಿದ್ದ ವಜ್ರಕುಮಾರ, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಾ ನಡೆದಿತ್ತು. ಇಂದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವಿದ್ಯಾಗಿರಿ ಜೆ ಎಸ್ ಎಸ್ ಕ್ಯಾಂಪಸ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು
ನಂತರ ಇಲ್ಲಿಂದ ವಜ್ರಕುಮಾರ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಯರ್ಮಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ವಜ್ರಕುಮಾರ ಅವರು ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಮಹಾ ವಿದ್ಯಾಲಯಗಳ ಆಡಳಿತ ಮಂಡಳಿಯ ಸದಸ್ಯ ಕೂಡಾ ಆಗಿದ್ದರು.