ಬಾಗಲಕೋಟೆ: ಅಪ್ಪನ ಕೊಲೆ ಮಾಡಲು ಮಗನೇ ಮೂರು ಲಕ್ಷ ಸುಪಾರಿ ಕೊಟ್ಟ ಪ್ರಕರಣವೊಂದು ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಚೆನ್ನಪ್ಪ (66) ಕೊಲೆಯಾದ ತಂದೆ. ವಿಕಲಚೇತನನಾಗಿರುವ ಮಗ ಚೆನ್ನಬಸಪ್ಪ ವಿಜಯಪುರ (Vijayapur) ಜಿಲ್ಲೆ ನಿಡಗುಂದಿ ಮೂಲದ ಮಾಂತೇಶ್ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ – 30 ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿ
ಆಸ್ತಿಗಾಗಿ ಕೊಲೆ: 32 ಎಕರೆ ಆಸ್ತಿ ಅದರಲ್ಲಿ ವಿಭಾಗ ಮಾಡುವ ವಿಚಾರಕ್ಕೆ ಪದೇ ಪದೇ ಕಲಹ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಅಪ್ಪನನ್ನು ಕೊಲೆ ಮಾಡಲು ಮಗ ಪ್ಲಾನ್ ಮಾಡಿದ್ದಾನೆ. ಅಂತೆಯೇ ಚೆನ್ನಬಸಪ್ಪ, ಸೊಸೆ ಶಿವಬಸವ್ವ ಹಾಗೂ ಮಗನ ಆಪ್ತ ರಮೇಶ್ ಮನಗೂಳಿ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಾರೆ. ಬಳಿಕ ಮಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ಹಣ ನೀಡಿದ್ದಾರೆ. ಅಂತೆಯೇ ಚೆನ್ನಪ್ಪನನ್ನು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗ ಚನ್ನಬಸಪ್ಪ, ಸೊಸೆ ಶಿವಬಸವ್ವ, ಸುಪಾರಿ ಪಡೆದು ಕೊಲೆ ಮಾಡಿದ ಮಾಂತೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.