ರಾಯಪುರ: ಅಪರಾಧಗಳನ್ನು ತಪ್ಪಿಸಲು ಮದ್ಯಪಾನವನ್ನು ಮಾಡಬೇಡಿ. ಬದಲಿಗೆ ಗಾಂಜಾ ಅಥವಾ ಭಾಂಗ್ ಸೇವಿಸಿ ಎಂದು ಛತ್ತೀಸ್ಗಢದ ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮದ್ಯಪಾನದಿಂದ ಅತ್ಯಾಚಾರ, ಕೊಲೆ, ದರೋಡೆ ಮುಂತಾದ ಅಪರಾಧಗಳು ಹೆಚ್ಚಾಗುತ್ತಿವೆ. ಆದರೆ ಭಾಂಗ್ ಅಥವಾ ಗಾಂಜಾ ಸೇವನೆ ಇಂತಹ ಅಪರಾಧಗಳನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕನ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಒಬ್ಬ ಸಾರ್ವಜನಿಕ ಪ್ರತಿನಿಧಿ ಮಾದಕ ದ್ರವ್ಯ ಸೇವಿಸಲು ಜನರಿಗೆ ಉತ್ತೇಜನ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಲವರ ಸಾವು
ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಹಿಂದೆಯೂ ಈ ಬಗ್ಗೆ ವಿಧಾನಸಭೆಯಲ್ಲಿ ಒಮ್ಮೆ ಚರ್ಚೆ ನಡೆಸಿದ್ದೆ. ಅತ್ಯಾಚಾರ, ಕೊಲೆ, ಅಪರಾಧಗಳಿಗೆ ಎಲ್ಲೋ ಒಂದೆಡೆ ಮದ್ಯಪಾನವೇ ಕಾರಣವಾಗಿರುತ್ತದೆ ಎಂದು ಹೇಳಿದ್ದೆ. ಇಲ್ಲಿಯವರೆಗೆ ಭಾಂಗ್ ಸೇವಿಸಿದವರು ಅತ್ಯಾಚಾರ, ಕೊಲೆಯಂತಹ ಕೃತ್ಯಗಳನ್ನು ಮಾಡಿದ್ದಾರಾ? ವ್ಯಸನದ ಅಗತ್ಯಗಳನ್ನು ಪೂರೈಸಲು ಇದು ಅತ್ಯುತ್ತಮ ಮಾರ್ಗ. ಮದ್ಯಪಾನವನ್ನು ನಿಷೇಧಿಸಲು ಇದು ಸಹಕಾರಿಯೂ ಆಗುತ್ತದೆ ಎಂದು ಕೃಷ್ಣಮೂರ್ತಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ
ಜನರು ವ್ಯಸನವನ್ನು ಬಯಸಿದರೆ, ಅವರಿಗೆ ಕೊಲೆ, ಅತ್ಯಾಚಾರಗಳಂತಹ ಅಪರಾಧಗಳಿಗೆ ಉತ್ತೇಜನ ನೀಡದ ವಸ್ತುಗಳನ್ನು ನೀಡಬೇಕು. ನಾವು ಇದಕ್ಕಾಗಿ ಭಾಂಗ್ ಮತ್ತು ಗಾಂಜಾದ ಕಡೆಗೆ ಮುನ್ನಡೆಯಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.