ಬೆಂಗಳೂರು: ನಗರದ ಕುಖ್ಯಾತ ರೌಡಿಶೀಟರ್ ಸ್ಲಂ ಭರತನ ಎನ್ಕೌಂಟರ್ ಆದ್ಮೇಲೆ ಇಡೀ ಬೆಂಗಳೂರು ರೌಡಿಸಂ ಬೆಚ್ಚಿಬಿದ್ದಿದೆ. ಒಂದಷ್ಟು ಸ್ವಯಂ ಘೋಷಿತ ರೌಡಿಗಳು ಊರು ಬಿಟ್ಟರೆ, ಮತ್ತಷ್ಟು ರೌಡಿಗಳು ಸಾರ್ ನನ್ನನ್ನ ಕಾಪಾಡಿ ಎಂದು ತಾವೇ ಪೊಲೀಸರಿಗೆ ಶರಣಾಗುತ್ತಿದ್ದಾರೆ.
ಸ್ಲಂ ಭರತನ ಎನ್ಕೌಂಟರ್ ನಂತರ ಆತನ ಸಹಚರರು ಸೇರಿದಂತೆ ಸಾಕಷ್ಟು ರೌಡಿಗಳು ಊರು ಬಿಟ್ಟಿದ್ದಾರೆ. ಇದರ ಮಧ್ಯೆ ನಗರದ ಉತ್ತರವಲಯದಲ್ಲಿ ಆಕ್ಟೀವ್ ಆಗಿದ್ದ ರೌಡಿಗಳೆಲ್ಲಾ ಒಬ್ಬೊಬ್ಬರಾಗಿ ಪೊಲೀಸರ ಮುಂದೆ ಮಂಡಿಯೂರಿ ಶರಣಾಗಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಅಟ್ಯಾಕ್- ಫೈರಿಂಗ್ಗೆ ಸ್ಲಂ ಭರತ್ ಸಾವು
ಕೊಲೆ, ಕೊಲೆ ಯತ್ನ, ರಾಬರಿ, ಸುಲಿಗೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಐವರು ರೌಡಿಶೀಟರ್ಗಳು ಗುರುವಾರ ಏಕಾಏಕಿ ಕೋರ್ಟ್ ಮುಂದೆ ಶರಣಾಗಿದ್ದಾರೆ. ಮಧು ಅಲಿಯಾಸ್ ಸ್ಲಂ ಮಧು, ವಿನಯ್ ಕುಮಾರ್ ಅಲಿಯಾಸ್ ಮಿಂಡ, ಅಜಯ್ ಅಲಿಯಾಸ್ ಗಜ್ಜಿ, ಮುನಿರಾಜು ಅಲಿಯಾಸ್ ಕರಿಯ, ಸತೀಶ್ ಅಲಿಯಾಸ್ ತುರೆ, ಶರಣಾದ ರೌಡಿಗಳು.
ಕೇವಲ ಉತ್ತರವಲಯದ ರೌಡಿಗಳು ಮಾತ್ರವಲ್ಲದೇ ಸ್ಲಂ ಭರತನ ಎನ್ಕೌಂಟರ್ಗೆ ಇಡೀ ಬೆಂಗಳೂರು ಅಪರಾಧ ಲೋಕವೇ ಬೆಚ್ಚಿ ಬಿದ್ದಿದ್ದು, ನಗರದ ವಿವಿಧ ವಲಯಗಳ ಪೊಲೀಸ್ ಠಾಣೆಗಳ ರೌಡಿಗಳು ತಾವಾಗಿಯೇ ಪೊಲೀಸರು ಮತ್ತು ಕೋರ್ಟ್ ಮುಂದೆ ಶರಣಾಗಿ ಇನ್ಮುಂದೆ ಯಾವುದೇ ಅಪರಾಧ ಚಟುವಟಿಗಳಲ್ಲಿ ಭಾಗಿಯಾಗಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.