ಚಾಮರಾಜನಗರ: ಮಹಾ ಶಿವರಾತ್ರಿ ಆಚರಣೆಯು ಜಿಲ್ಲೆಯಲ್ಲಿ ಕಳೆಗಟ್ಟಿದ್ದು ವಿವಿಧ ದೇವಾಲಯಗಳಿಗೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬರುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಂತೂ ಭಕ್ತ ಸಾಗರವೇ ಜಮಾಯಿಸಿದೆ.
ಮಲೆ ಮಹದೇಶ್ವರ ಬೆಟ್ಟದ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು ದೇಗುಲದ ಪ್ರಾಂಗಣ, ಗರ್ಭಗುಡಿಗೆ ಹಣ್ಣು-ತರಕಾರಿ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತಿದೆ. ಮುಸುಕಿನ ಜೋಳ, ಕಬ್ಬು, ಸೇಬು ಸೇರಿದಂತೆ ವಿವಿಧ ಹಣ್ಣು-ತರಕಾರಿಗಳಿಂದ ಮಲೆ ಮಹದೇಶ್ವರ ದೇವಾಲಯ ಕಂಗೊಳಿಸುತ್ತಿದೆ. ಇದನ್ನೂ ಓದಿ: 23,000 ರುದ್ರಾಕ್ಷಿ ಬಳಸಿ ಶಿವನ ಶಿಲ್ಪಕಲೆ – ಕಲಾವಿದನ ಕೈಚಳಕಕ್ಕೆ ಮನಸೋತ ನೆಟ್ಟಿಗರು
ಇಂದು ಮಲೆ ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಸೇವೆ ನಡೆದಿದ್ದು, ಸಂಜೆ ಹೊತ್ತಿಗೆ ಉತ್ಸವಗಳು ಜರುಗಲಿವೆ. ಬುಧವಾರ ಅಮಾವಾಸ್ಯೆ ವಿಶೇಷ ಪೂಜೆ, ಗುರುವಾರ ಬೆಳಗ್ಗೆ 8.10 ರಿಂದ 8.45ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಮಾದೇಶ್ವರ ಸ್ವಾಮಿಯ ಮಹಾ ರಥೋತ್ಸವ ನೆರವೇರಲಿದೆ. ಅದೇ ದಿನ ರಾತ್ರಿ ಅಭಿಷೇಕ ಮುಗಿದ ಬಳಿಕ ನಡೆಯುವ ಕೊಂಡೋತ್ಸದೊಂದಿಗೆ ಈ ಬಾರಿಯ ಶಿವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಇಂದು ಮಹಾಶಿವರಾತ್ರಿ – ಆದಿ ಅಂತ್ಯವಿಲ್ಲದ ಶಿವನ ಆರಾಧಕರಿಗೆ ಇಂದು ಹಬ್ಬ