– ಅಸಲಿ, ನಕಲಿ ಸ್ವಾಮೀಜಿಗಳ ಫೈಟ್
ಶಿವಮೊಗ್ಗ: ನಗರದ ರಾಮಲಿಂಗೇಶ್ವರ ಮಠ, ಈ ಮಠದ ಹೆಸರಲ್ಲಿ ಬೆಂಗಳೂರಿನ ನಾಗಸಂದ್ರ ಬಳಿ 18 ಎಕರೆ ಜಮೀನಿದೆ. ನೂರಾರು ಕೋಟಿ ಬೆಲೆಬಾಳುವ ಈ ಜಾಗದ ಮೇಲೆ ಸ್ವಾಮೀಜಿಗಳು, ರಾಜಕಾರಣಿಗಳು, ಪ್ರಭಾವಿಗಳ ಕಣ್ಣು ಬಿದ್ದಿದೆ. ಸ್ವಾಮೀಜಿಗಳ ನಡುವೆಯೇ ಅಸಲಿ, ನಕಲಿ ಅಂತ ವಿವಾದ ತಾರಕಕ್ಕೇರಿದೆ.
ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠಕ್ಕೆ ನೂರಾರು ವರ್ಷ ಇತಿಹಾಸ ಇದೆ. ಕೆಳದಿ ಸಂಸ್ಥಾನದ ಅರಸರ ಕಾಲದಲ್ಲಿ ಈ ಮಠ ಅಸ್ತಿತ್ವಕ್ಕೆ ಬಂತಂತೆ. ಮಠ ಆರಂಭದ ದಿನಗಳಲ್ಲಿ ದಾಸೋಹ, ಪೂಜೆ-ಪ್ರವಚನ ಮಾಡಿಕೊಂಡು ಸಾಮಾಜಮುಖಿ ಕೆಲಸದಲ್ಲಿ ತೊಡಗಿತ್ತು. ಕಾಲಕ್ರಮೇಣ ಮಠ ಕೂಡ ಕಮರ್ಷಿಯಲ್ ಟಚ್ ಪಡೆದುಕೊಂಡಿತು. ಈ ಮಠಕ್ಕೆ ಬೆಂಗಳೂರಿನ ನಾಗಸಂದ್ರ ಬಳಿ ನೂರಾರು ಕೋಟಿ ರೂ. ಬೆಲೆ ಬಾಳುವ 18 ಎಕರೆ ಜಮೀನಿದ್ದು ಮಠದ ಆಸ್ತಿ ಕಬಳಿಸಲು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದ್ಯಂತೆ.
ಮಠದ ಆಸ್ತಿ ವ್ಯಾಜ್ಯ ಕೋರ್ಟಿನಲ್ಲಿದ್ದು 1988ರಿಂದ ಇಂದಿನವರೆಗೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸದ್ಯ ವಿಶ್ವರಾಧ್ಯ ಸ್ವಾಮೀಜಿ ಮಠದಲ್ಲಿ ವಾಸವಿದ್ದು, ಕಾಶಿ ಪ್ರವಾಸಕ್ಕೆ ಹೋಗಿದ್ದಾರೆ. ಇದೇ ವೇಳೆ ರಾಮಲಿಂಗೇಶ್ವರ ಮಠದ ಮೂಲ ಸ್ವಾಮೀಜಿ ನಾನೇ ಅಂತ ಹೇಳಿಕೊಂಡು ಶಿವಕುಮಾರ ಸ್ವಾಮಿ ಅಲಿಯಾಸ್ ಚಂದ್ರಮೌಳೇಶ್ವರ ಸ್ವಾಮೀಜಿ ತಮ್ಮ ಬೆಂಬಲಿಗರ ಜೊತೆ ಬಂದು ಮಠಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಮಠದಲ್ಲಿದ್ದ ವಿಶ್ವರಾಧ್ಯ ಶ್ರೀ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂಸಿ ಪೊಲೀಸರು ಗುಂಪು ಗಲಾಟೆ ತಪ್ಪಿಸಿದ್ದಾರೆ.
ಬೆಂಗಳೂರಿನ ನಾಗಸಂದ್ರ ಬಳಿ ಮಠಕ್ಕೆ ಸೇರಿದ 18 ಎಕರೆ ಜಮೀನನ್ನು ಮೆಟ್ರೋ ಕಾಮಗಾರಿಗೆ ಬಿಎಂಆರ್ಸಿಎಲ್ ವಶಪಡಿಸಿಕೊಂಡಿದೆ. ಪರಿಹಾರ ಮೊತ್ತವಾಗಿ 88 ಕೋಟಿ ರೂ.ನೀಡಿದೆ. ಆದರೆ ಈ ಭೂಮಿ ನ್ಯಾಯಾಲಯದಲ್ಲಿದ್ದ ಕಾರಣ ಪರಿಹಾರದ ಹಣ ಸರ್ಕಾರದ ಬಳಿಯೇ ಇದೆ. ಹಾಗಾಗಿ ಈ ಹಣ ಲಪಟಾಯಿಸಲು ಮಠದ ಗಂಧ-ಗಾಳಿಯೇ ಗೊತ್ತಿಲ್ಲದವರು ಕೂಡ ನಾನು ಸ್ವಾಮೀಜಿ, ನಾನು ಪೀಠಾಧಿಪತಿ ಅಂತ ಹೊಸಹೊಸದಾಗಿ ಹುಟ್ಟಿಕೊಳ್ತಿದ್ದಾರಂತೆ.
ಒಟ್ಟಾರೆ, ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ ಗೊಂದಲದ ಗೂಡಾಗಿದೆ. ಈಗಾಗಿ ಇಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆಗ ಸತ್ಯಾಸತ್ಯತೆ ಹೊರ ಬರಲಿದೆ ಅಂತ ಮಠದ ಭಕ್ತರು ಹಾಗು ಗ್ರಾಮಸ್ಥರು ಆಗ್ರಹಿಸಿದ್ದಾರೆ.