ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಇದೀಗ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಡೆಯಬಾರದ ಘಟನೆ ನಡೆದು ಹೋಗಿದೆ. ದೇಶದ ನಂಬರ್ 1 ಶಾಲೆಯೊಂದರ ಕಾಮುಕ ಶಿಕ್ಷಕನಿಗೆ ಪೊಲೀಸರೇ ಬೆನ್ನುಲುಬಾಗಿ ನಿಂತು ರಕ್ಷಿಸಿರುವ ಕುರಿತು ದಾಖಲೆ ಸಮೇತ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.
ಪಾಠ ಹೇಳಿಕೊಡುವ ಪ್ರಿನ್ಸಿಪಾಲ್ ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ಬೆಂಗಳೂರಿನ ಸದಾಶಿವನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಅಂದ್ರೆ ನೀವು ನಂಬಲೇ ಬೇಕು. ಹೌದು. ಈ ಶಾಲೆಯ ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರೋದು ಬಹಿರಂಗವಾಗಿದೆ. ಈತನ ರಕ್ಷಣೆಗೆ ಬೆನ್ನ ಹಿಂದೆ ನಿಂತಿದ್ದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್!.
ಏನಿದು ಪ್ರಕರಣ: ಜನವರಿ 14ರಂದು ಬೆಂಗಳೂರಿನ ನೋಡಲ್ ಚೈಲ್ಡ್ ಲೈನ್ಗೆ ಒಂದು ಫೋನ್ ಬಂತು. ಕೇಂದ್ರಿಯ ವಿದ್ಯಾಲಯದ ಶಿಕ್ಷಕರೇ ಮಾಡಿದ ಫೋನ್ ಅದಾಗಿತ್ತು. ಕಳೆದ ಮೂರು ವರ್ಷಗಳಿಂದ ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ವಿದ್ಯಾರ್ಥಿಗಳಿಗೆ ಲೈಂಗಿಕವಾಗಿ ಕಿರುಕುಳ ಕೊಡ್ತಿದ್ದಾರೆ. ನಮ್ಮ ಕೈಯಲ್ಲಿ ಏನು ಮಾಡೋಕೆ ಆಗ್ತಿಲ್ಲ. ದಯವಿಟ್ಟು ಮಕ್ಕಳ ಜೀವ, ಜೀವನ ಎರಡನ್ನೂ ಉಳಿಸಿ ಅಂತ ಕರೆಯಲ್ಲಿ ತಿಳಿಸಿದ್ರು. ತಕ್ಷಣ ಚೈಲ್ಡ್ಲೈನ್ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿ ತನಿಖೆ ನಡೆಸಲು ಸೂಚಿಸಿದ್ರು.
ಪ್ರಕರಣವನ್ನ ಸೂಕ್ಷ್ಮವಾಗಿ ಬೆನ್ನುಹತ್ತಿದ ಬೆಂಗಳೂರು ಪೊಲೀಸರು ದೂರು ಕೊಟ್ಟ ಶಿಕ್ಷಕರನ್ನ ವಿಚಾರಣೆ ನಡೆಸಿದ್ರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಏಳು ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದ್ರು. ಆಗ ಲೈಂಗಿಕ ಕಿರುಕುಳ ನೀಡಿರೋದು ಸಾಬೀತಾಯ್ತು. ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಷಯ ಮುಟ್ಟಿಸಿದ್ರು. ಆದ್ರೆ ಆ ಪೊಲೀಸ್ ಅಧಿಕಾರಿ ಟಿವಿಯವರಿಗೆ ಮಾಹಿತಿ ನೀಡದಂತೆ ಗೌಪ್ಯವಾಗಿ ಇಡಲು ಆದೇಶ ಮಾಡಿದ್ರು.
ಹೌದು ನಂಬೋದಕ್ಕೆ ಕಷ್ಟವಾದ್ರೂ ಇದು ಸತ್ಯ. ಜನವರಿ 25ರಂದು ಕುಮಾರ್ ಠಾಕೂರ್ ಮೇಲೆ ಎಫ್ಐಆರ್ ಹಾಕಿ 6 ದಿನ ಆದ್ಮೇಲೆ ಅವ್ರನ್ನ ಅರೆಸ್ಟ್ ಮಾಡಿದ್ರು. ಆದ್ರೆ ಎರಡೇ ದಿನದಲ್ಲಿ ಅವರಿಗೆ ಬೇಲ್ ಸಿಗುವಂತೆಯೂ ಮಾಡಿ ಫೆಬ್ರವರಿ 1ರಂದು ಕುಮಾರ್ ಠಾಕೂರ್ಗೆ ಜಾಮೀನು ಕೂಡ ಸಿಕ್ಕಿದೆ. ಆದ್ರೆ ಇದೀಗ ಮಾಧ್ಯಮಗಳಿಗೆ ಈ ಮಾಹಿತಿ ಲಭಿಸಿದ್ದು, ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಆರೋಪಿ ಹಾಗೂ ಪೊಲೀಸರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ ಅಂತಾ ಕಾದುನೋಡಬೇಕು.