ರಾಯಚೂರು: ಮಕರ ಸಂಕ್ರಮಣ ಹಿನ್ನೆಲೆ ಮಂತ್ರಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಸಂಕ್ರಾಂತಿಯ ಹಿನ್ನೆಲೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ನಾಡಿನ ಜನತೆಗೆ ಶುಭ ಕೋರಿದ್ದಾರೆ. ಕೊರೊನಾ ದೇಶದಿಂದ ತೊಲಗಲಿ ಎಂದು ಶ್ರೀಗಳು ಹಾರೈಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀಗಳು, ತುಂಗಭದ್ರ ನದಿಯಲ್ಲಿ ಮಿಂದೆದ್ದು ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ರಾಯರ ದರ್ಶನ ಪಡೆದು ಸಂಕ್ರಾಂತಿಯನ್ನು ಆಚರಿಸುತ್ತಿದ್ದಾರೆ. ಇಂದು ಮತ್ತು ನಾಳೆ ಸಂಕ್ರಾಂತಿ ಹಾಗೂ ಬೋಗಿ ಹಬ್ಬ ಇದೆ. ನಾಳೆಯ ದಿನ ಮಕರ ಸಂಕ್ರಾಂತಿ, ಸಂಕ್ರಮಣೋತ್ಸವ ನಡೆಯಲಿದೆ. ಎಲ್ಲರೂ ಸಂಭ್ರಮದಿಂದ, ಸಂತೋಷದಿಂದ ಹಬ್ಬವನ್ನು ಆಚರಿಸಬೇಕು. ಈ ಕೊರೊನಾ ಮಹಾಮಾರಿ ಸಮಸ್ತ ಮನುಕುಲವನ್ನು ಎರಡು ವರ್ಷಗಳಿಂದ ಪೀಡಿಸುತ್ತಿದೆ. ಕೊರೊನಾ ಕಡಿಮೆ ಆಗುವಷ್ಟೊತ್ತಿಗೆ ಈ ಓಮಿಕ್ರಾನ್ ವೈರಸ್ ತೊಂದರೆ ಕೊಡುತ್ತಿದೆ ಜನ ಎಚ್ಚರಿಕೆಯಿಂದ ಇರಬೇಕು ಎಂದರು. ಇದನ್ನೂ ಓದಿ: ನಾಡೋಜ ಚನ್ನವೀರ ಕಣವಿಗೆ ಕೊರೊನಾ ಪಾಸಿಟಿವ್
ದೇಶದ ಪ್ರಧಾನಿಗಳು ಎಲ್ಲಾ ಜನತೆಗೆ ಲಸಿಕೆ ಕೊಡಿಸಲು ಮುಂದಾಗಿದ್ದಾರೆ. ದೇಶದ ಎಲ್ಲಾ ಜನರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು. ಹಬ್ಬ ಹರಿದಿನಗಳನ್ನು ಆಚರಿಸೋದು ಎಷ್ಟು ಮುಖ್ಯವೋ, ಆರೋಗ್ಯ ಕಾಪಾಡಿಕೊಳ್ಳೋದು ಅಷ್ಟೇ ಮುಖ್ಯ. ದೇಶದಾದ್ಯಂತ ಈಗಾಗಲೇ ಮಕ್ಕಳಿಗೂ ವ್ಯಾಕ್ಸಿನ್ ಕೊಡಲಾಗುತ್ತಿದೆ. ಹೀಗಾಗಿ ದೇಶದಲ್ಲಿ ಎಲ್ಲರೂ ಆರೋಗ್ಯದಿಂದಿರಬೇಕು. ಅಗತ್ಯವಿರುವವರೆಲ್ಲಾ ಬೂಸ್ಟರ್ ಡೋಸ್ ಪಡೆದು, ಆರೋಗ್ಯ, ಸುಖ, ಸಂತೋಷದಿಂದ ಇರುವಂತಾಗಲಿ ಎಂದು ಸುಭುದೇಂದ್ರ ತೀರ್ಥರು ಆಶಿಸಿದರು. ಇದನ್ನೂ ಓದಿ: ಮೋದಿಯ ಮೆಚ್ಚುಗೆಗೆ ಪಾತ್ರವಾಗಿದ್ದ ಕಾಮೇಗೌಡರ ಸಾಮಾಜಿಕ ಸೇವೆಗೆ ಅಧಿಕಾರಿಗಳು ಅಡ್ಡಿ