-ಕಡಬಗೆರೆ ಸೀನನ ಕೊಲೆ ಯತ್ನ ಪ್ರಕರಣ ರೀ ಓಪನ್ ಮಾಡಿ
ಬೆಂಗಳೂರು: ಹಲವು ಕೇಸ್ಗಳಲ್ಲಿ ನನ್ನ ವಿರುದ್ಧ ಮೊದಲಿಂದಲೂ ಹುನ್ನಾರ ನಡೆಯತಿತ್ತು. ಎಲ್ಲ ಕೇಸ್ ಗಳಿಂದಲೂ ಹೊರಗೆ ಬಂದಿದ್ದೇನೆ. ರಾಜಕೀಯ ಜಿದ್ದಾಜಿದ್ದಿಗೆ ಇವೆಲ್ಲ ಮಾಡಿದ್ದಾರೆ. ಶಾಸಕರ ಕೊಲೆಗೆ ಸುಪಾರಿ ವಿಷಯದಿಂದ ಕ್ಷೇತ್ರದ ಜನ ದಿಗ್ಬ್ರಾಂತರಾಗಿದ್ದಾರೆ. ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಆರೋಪಿಸಿದ್ದಾರೆ.
ಕೊಲೆಗೆ ಸ್ಕೆಚ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಎಸ್.ಆರ್ ವಿಶ್ವನಾಥ್, ರಾಜ್ಯದಲ್ಲಿ ಇಂತಹ ಇತಿಹಾಸ ಇಲ್ಲಿಯವರೆಗೆ ಇರಲಿಲ್ಲ. ಗೋಪಾಲಕೃಷ್ಣಗೆ ಇಂತಹ ದುರ್ಬುದ್ಧಿ ಯಾಕೆ ಬಂತೋ ಗೊತ್ತಿಲ್ಲ. ಆತ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದವನು. ಹೀಗಾದರೆ ಗೆದ್ದವರನೆಲ್ಲಾ ಕೊಲೆ ಮಾಡಕ್ಕಾಗುತ್ತಾ? 42 ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದೇನೆ ಮೂರು ಬಾರಿ ಶಾಸಕನಾಗಿದ್ದೇನೆ. ಸುದೀರ್ಘ ರಾಜಕೀಯ ಅವಧಿಯಲ್ಲಿ ಇಂಥ ಘಟನೆ ನಡೆದಿಲ್ಲ. ಸಜ್ಜನಿಕೆಯಿಂದ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದ್ದೇನೆ. ಕಳೆದೆರಡು ಸಲ ನನ್ನ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ನ ಗೋಪಾಲಕೃಷ್ಣ ಮೂರನೇ ಬಾರಿ ಅವರು ಸೋತಿದ್ದರು. ನಿನ್ನೆ ಸಂಜೆ 7:30ಕ್ಕೆ ನನಗೊಂದು ಪತ್ರ ತಲುಪಿತ್ತು. ಕುಳ್ಳ ದೇವರಾಜ್ ಕ್ಷಮಾಪಣೆ ಪತ್ರಬರೆದಿದ್ದರು. ಗೋಪಾಲಕೃಷ್ಣ ಕೊಲೆಗೆ ಸಂಚು ಮಾಡುತ್ತಿದ್ದಾರೆ ಎಂಬ ಬಗ್ಗೆ ಪತ್ರದಲ್ಲಿ ಉಲ್ಲೇಖವಾಗಿತ್ತು. ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮಾಧ್ಯಮಗಳಲ್ಲಿ, ನಿಜವಾದ ವೀಡಿಯೋ ನೋಡಿದ ನಂತರ ದಿಗ್ಭ್ರಮೆ ಆಯಿತು. ಈಗ ದೂರು ಕೊಟ್ಟಿದ್ದೇನೆ. ಸಿಎಂ ಜೊತೆಗೂ ಮಾತಾಡಿದ್ದೇನೆ ಉನ್ನತ ತನಿಖೆ ಮಾಡಲು ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್
ಸಾಮಾನ್ಯ ಶಾಸಕನಿಗೆ ಕೊಲೆ ಮಾಡುವ ಚಿಂತನೆ ಸರಿಯಲ್ಲ. ಚುನಾವಣೆಯಲ್ಲಿ ಸೋಲಿಸಲು ಕಷ್ಟ ಅಂತ ಸಂಭಾಷಣೆ ಆರಂಭವಾಗಿದೆ. ಮುಗಿಸಬೇಕು ಎಂದು ಮಾತನಾಡಿದ್ದಾರೆ. ಆಂಧ್ರದಿಂದ ಹಂತಕರನ್ನು ಕರೆಸುವ ಬಗ್ಗೆ ಮಾತನಾಡಿದ್ದಾರೆ. ಶ್ರೈಯಸ್ ಹೊಟೇಲ್ ನಲ್ಲಿ ಕಿಲ್ಲರ್ಸ್ ಕರೆ ತಂದು ಇಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಕಡಪ್ಪಾದಿಂದಲೂ ಕಿಲ್ಲರ್ಸ್ ಕರೆಸುವ ಕುರಿತು ಸಮಾಲೋಚನೆ ನಡೆದಿದೆ. ಕಾಂಗ್ರೆಸ್ ಅವಧಿಯಲ್ಲೂ ನನ್ನ ಮೇಲೆ ಶೂಟ್ಔಟ್ ಯತ್ನ ನಡೆದಿತ್ತು ಎಂದಿದ್ದಾರೆ. ಇದನ್ನೂ ಓದಿ: ಮಗಳು, ಇಬ್ಬರು ಪತ್ನಿಯರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಕೆಜಿಎಫ್ ಬಾಬು
ನಾನು ಜನಪರ ಕೆಲಸ ಮಾಡಿಕೊಂಡು ಬಂದಿದ್ದೇನೆ. ಜನ ಸದಾ ನಮ್ಮ ಮನೆ ಬಳಿ ಇರ್ತಾರೆ. ನಾನು ಗನ್ ಮ್ಯಾನ್, ಡ್ರೈವರ್ ಜೊತೆ ಇರುತ್ತೇನೆ. ಯಾವಾಗ ಬೇಕಾದ್ರೂ ಅವರು ನನಗೆ ಹೊಡೆಯಬಹುದು. ನಾನು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕಾರ ಕೊಡುತ್ತೇನೆ. ವಿಪಕ್ಷದವರೂ ತನಿಖೆಗೆ ಸಹಕರಿಸಲಿ. ನಿಧಾನ ಆದರೂ ಸಮಗ್ರ ತನಿಖೆ ಆಗಲಿ. ಇದರ ಹಿಂದೆ ಯಾರ್ಯಾರಿದ್ದಾರೆ ಎಂಬುದು ಗೊತ್ತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕುಳ್ಳ ದೇವರಾಜ್ ಗೊತ್ತು. ಆದರೆ ಆತ ನನ್ನ ಪಕ್ಷದ ಕಾರ್ಯಕರ್ತ ಅಲ್ಲ. ಆತನ ಸಂಪರ್ಕ ಇಲ್ಲ, ಫೋನ್ ನಂಬರ್ ಸಹ ಇಲ್ಲ. ಆರು ತಿಂಗಳ ಹಿಂದೆ ಸಂಚು ನಡೆದಿರುವ ಬಗ್ಗೆ ಗೊತ್ತಿಲ್ಲ. ನನಗೆ ವೀಡಿಯೋ ಕುಳ್ಳ ದೇವರಾಜ್ ಕಳುಹಿಸಿದ್ದು, ನನಗೆ ನಿನ್ನೆ ಸಂಜೆ ಗ್ರೀನ್ ಕವರ್ ನಲ್ಲಿ ವೀಡಿಯೋ ಬಂದಿತ್ತು. ಕ್ಷಮಾಪಣೆ ಪತ್ರವೂ ಅದರ ಜೊತೆಗೆ ಇತ್ತು. ಕುಳ್ಳದೇವರಾಜ್, ಗೋಪಾಲಕೃಷ್ಣನ ಪರಮ ಶಿಷ್ಯ. ಕುಳ್ಳ ದೇವರಾಜ್ ವೀಡಿಯೋ ಮಾಡಲು ಹೋದಾಗ ಗೋಪಾಲಕೃಷ್ಣ ಮಣ್ಣು ತಿಂತಿದ್ನಾ? ಪದೇ ಪದೇ ಕೊಲೆ ಸಂಚು ಬಗ್ಗೆ ಮಾತನಾಡುತ್ತಿದ್ದ ಗೋಪಾಲಕೃಷ್ಣ ನನ್ನ ಚಲನವಲನ ಎಲ್ಲ ಗಮನಿಸಿದ್ದ ಅನಿಸುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮ್ಮ ಮನೆಯಲ್ಲಿ ಅಲ್ಲಾ,ಏಸು ಫೋಟೋ ಇಟ್ಟಿಲ್ಲ- ಸತೀಶ್ ಸೈಲ್
ನಿನ್ನೆ ಗೋಪಾಲಕೃಷ್ಣರನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಬಂದಿದ್ರು. ಯಾರೋ ಹಿರಿಯ ರಾಜಕಾರಣಿಯೊಬ್ಬರು ಪೊಲೀಸರಿಗೆ ಧಮ್ಕಿ ಹಾಕಿದ್ದರಂತೆ. ಅದಕ್ಕೆ ಪೊಲೀಸರು ಗೋಪಾಲಕೃಷ್ಣನನ್ನು ಬಿಟ್ಟು ಕಳುಹಿಸಿದ್ದಾರೆ. ನಾನು ಗೋಪಾಲಕೃಷ್ಣನನ್ನು ಬಂಧನ ಮಾಡಲಿ ಅಂತ ಆಗ್ರಹಿಸಲ್ಲ ವಿಚಾರಣೆ ಮಾಡಲಿ, ಸತ್ಯ ಹೊರಗೆ ತರಲಿ. ಕಾಂಗ್ರೆಸ್ ಸರ್ಕಾರ ಇದ್ದಾಗ ನನ್ ವಿರುದ್ಧ ದುರುದ್ದೇಶದ ಕೇಸ್ ಹಾಕಿದ್ರು. ನಾನು ದ್ವೇಷದ ರಾಜಕಾರಣ ಮಾಡಲು ಹೋಗಿಲ್ಲ ಎಂದರು.
ಕಡಬಗೆರೆ ಸೀನನ ಕೊಲೆ ಯತ್ನ ಪ್ರಕರಣ ಸಹ ರೀ ಓಪನ್ ಮಾಡಬೇಕು. ಸಮಗ್ರ ತನಿಖೆ ಮಾಡಬೇಕಾದರೆ ಸೀನನ ಕೊಲೆ ಯತ್ನ ಪ್ರಕರಣವೂ ರೀ ಓಪನ್ ಆಗಲಿ ಎಂದು ಒತ್ತಾಯಿಸಿದರು.