ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಕಾಂಗ್ರೆಸ್ಸಿನ ಅನರ್ಹ ಶಾಸಕ ರೋಷನ್ ಬೇಗ್ ಭೇಟಿ ನೀಡಿದ್ದಾರೆ.
ಭೇಟಿ ವೇಳೆ, ನಿಮಗಾಗಿ ಶಿವಾಜಿನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮ ಕೊಟ್ಟಿದ್ದೇನೆ. ಇದೀಗ ಪದೇ ಪದೇ ವಿಚಾರಣೆಗೆ ಕರೆದು ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಹೀಗಾಗಿ ಈ ಸಂಕಷ್ಟದಿಂದ ನೀವೇ ನನ್ನನ್ನು ಪಾರು ಮಾಡಬೇಕು ಎಂದು ಸಿಎಂ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಮೂಲಕ ಹೇಗಾದರೂ ಮಾಡಿ ಎಸ್ಐಟಿ ಖೆಡ್ಡಾದಿಂದ ತಮ್ಮನ್ನು ಪಾರು ಮಾಡುವಂತೆ ರೋಷನ್ ಬೇಗ್ ಸಿಎಂ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಐಎಂಎ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ರೋಷ್ ಬೇಗ್ ಅವರಿಗೆ ಎಸ್ ಐಟಿ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ. ಎಸ್ ಐಟಿ ವಿಚಾರಣೆ ತಪ್ಪಿಸಿಕೊಂಡು ಪುಣೆಗೆ ಹೋಗುತ್ತಿದ್ದ ರೋಷನ್ ಬೇಗ್ರನ್ನ ಎಸ್ಐಟಿ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿತ್ತು. ಆ ನಂತರವೂ ಮೂರು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ರೋಷನ್ ಬೇಗ್ ರನ್ನ ಕರೆದಿದೆ. ಎಸ್ ಐಟಿ ಹೊಡೆತದಿಂದ ಕಂಗಾಲಾದ ರೋಷನ್ ಬೇಗ್ ಇದೀಗ ಸಿಎಂ ಯಡಿಯೂರಪ್ಪ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.