ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರ ಸ್ವಾಮೀಜಿಗೆ ಶ್ರೀರಂಗಪಟ್ಟಣದ JMFC ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಹಲವು ದಿನಗಳ ಹಿಂದೆ ಋಷಿಕುಮಾರ ಸ್ವಾಮೀಜಿ ಶ್ರೀರಂಗಪಟ್ಟಣಕ್ಕೆ ಬಂದ ವೇಳೆ ಜಾಮೀಯಾ ಮಸೀದಿ ಬಳಿ ತೆರಳಿ ವೀಡಿಯೋವನ್ನು ಮಾಡಿದ್ದಾರೆ. ಆ ವೀಡಿಯೋದಲ್ಲಿ ಈ ಮಸೀದಿ ಮೊದಲು ದೇವಸ್ಥಾನವಾಗಿದೆ, ಇಲ್ಲಿನ ಶಿಲ್ಪಕಲೆಗಳನ್ನು ನೋಡಿದರೆ ಇದು ಹಿಂದೂ ದೇವಸ್ಥಾನವೆಂದು ತಿಳಿಯುತ್ತದೆ. ಬಾಬ್ರಿ ಮಸೀದಿ ರೀತಿ ಈ ಮಸೀದಿಯನ್ನು ಒಡೆದು ಹಾಕಿ ಹಿಂದೂ ದೇವಸ್ಥಾನವನ್ನು ಕಟ್ಟಬೇಕೆಂದು ಹೇಳಿ ಆ ವೀಡಿಯೋವನ್ನು ಸಾಮಾಜಿಕ ಜಾಲಣದಲ್ಲಿ ಹಾಕಿದ್ದರು. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂದಿದ್ದ ಕಾಳಿಸ್ವಾಮಿ ಅರೆಸ್ಟ್
ಈ ಹಿನ್ನೆಲೆ ಶ್ರೀರಂಗಪಟ್ಟಣದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಎಂದು ಋಷಿಕುಮಾರ ಸ್ವಾಮೀಜಿ ಮೇಲೆ ಪ್ರಕರಣ ದಾಖಲಾಗಿತ್ತು. ಬಳಿಕ ಶ್ರೀರಂಗಪಟ್ಟಣದ ಪೊಲೀಸರು ಕಡೂರಿನ ಕಾಳಿ ಮಠಕ್ಕೆ ತೆರಳಿ ಋಷಿಕುಮಾರ ಸ್ವಾಮೀಜಿಯನ್ನು ಬಂದಿಸಿದ್ದರು. ಬಳಿಕ ಸ್ವಾಮೀಜಿಯನ್ನು ವಿಚಾರಣೆಗೆ ಒಳಪಡಿಸಿ ಪೊಲೀಸರು ಶ್ರೀರಂಗಪಟ್ಟಣದ JMFC ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಈ ವೇಳೆ ಋಷಿಕುಮಾರ ಸ್ವಾಮೀಜಿಯ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ನಿನ್ನೆ ಜಾಮೀನು ಅರ್ಜಿಯನ್ನು ಪರಿಶೀಲನೆ ಮಾಡಿದ ನ್ಯಾಯಾಧೀಶರು ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಇಂದು ತೀರ್ಪು ನೀಡುವುದಾಗಿ ತಿಳಿಸಿತ್ತು. ಅದರಂತೆ ನಿನ್ನೆ ಋಷಿಕುಮಾರ ಸ್ವಾಮೀಜಿಯನ್ನು ಮಂಡ್ಯ ಕಾರಾಗೃಹದಲ್ಲಿ ಇಡಲಾಗಿತ್ತು. ಇಂದು ಶ್ರೀರಂಗಪಟ್ಟಣ JMFC ನ್ಯಾಯಾಲಯ ಕಾಳಿ ಸ್ವಾಮೀಜಿ ಪ್ರತಿ ಭಾನುವಾರ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಿ ತನಿಖೆಗೆ ಸಹಕಾರ ನೀಡಬೇಕೆಂದು ಷರತ್ತು ವಿಧಿಸಿ ಜಾಮೀನು ನೀಡಿದೆ.