ಚಿಕ್ಕಬಳ್ಳಾಪುರ: ಅಯ್ಯಯ್ಯೋ ಮಾರಕಾಸ್ತ್ರಗಳನ್ನ ತಂದವ್ರೆ…ನಾನು ಬದುಕಲ್ಲ ನೇಣು ಹಾಕೋತಿನಿ ಅಂತ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಚಿಕ್ಕಬಳ್ಳಾಪುರ ನಗರದ ಎಚ್.ಎಸ್ ಗಾರ್ಡನ್ ಬಳಿ ಹೈಡ್ರಾಮಾ ಮಾಡಿದ್ದಾರೆ.
ಎಚ್.ಎಸ್ ಗಾರ್ಡನ್ ಬಳಿ ನಿವೃತ್ತ ಪೊಲೀಸ್ ಅಧಿಕಾರಿ ಆಶ್ವತ್ಥನಾರಾಯಣಪ್ಪ ಎಂಬವರು ತಮ್ಮ ಸ್ವಂತ ಜಮೀನಿನಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಲೆಂದು ಕಂಪನಿಗೆ ಜಾಗ ಕೊಟ್ಟಿದ್ದಾರೆ. ಮೊಬೈಲ್ ಟವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು ಅಂತ ಸುತ್ತಮುತ್ತಲಿನ ಸ್ಥಳೀಯರು ಕಾಮಗಾರಿ ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ
ಸ್ಥಳೀಯರ ಆಕ್ಷೇಪಕ್ಕೆ ಮಣಿಯದ ಅಶ್ವತ್ಥನಾರಾಯಣಪ್ಪ, ಇದು ನನ್ನ ಸ್ವಂತ ಜಮೀನು ನಾನು ಏನ್ ಬೇಕಾದ್ರೂ ಮಾಡ್ಕೋತಿನಿ ಅಂತ ಹೇಳಿದ್ದಾರೆ. ಇದರಿಂದ ಕೆರಳಿರೋ ಸ್ಥಳೀಯರು, ಅಶ್ವತ್ಥನಾರಾಯಣಪ್ಪ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಂತೆ ಕ್ಯಾಮೆರಾ ಮುಂದೆ ಅಯ್ಯಯ್ಯೋ ನನ್ನ ಮಾರಕಾಸ್ತ್ರಗಳಿಂದ ಹಲ್ಲೆ ಮಾಡ್ತಾವ್ರೆ ಅಂತ ಹೈಡ್ರಾಮಾ ಶುರು ಮಾಡಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಗಳ ತೆರವು ವಿರೋಧ: ಸರ್ಕಾರದ ವಿರುದ್ಧ ಭಜರಂಗದಳ ಆಕ್ರೋಶ
ಸ್ಥಳೀಯರು ನಗರಸಭೆ ಅನುಮತಿ ಪಡೆಯದೆ ಮೊಬೈಲ್ ಟವರ್ ನಿರ್ಮಾಣ ಮಾಡ್ತಿದ್ದಾರೆ ಅಂತ ನಗರಸಭೆಗೆ ದೂರು ನೀಡಿದ್ದು, ನಗರಸಭೆ ಪರಿಸರ ಅಭಿಯಂತರರು ಸ್ಥಳಕ್ಕೆ ಬಂದು ನೋಟಿಸ್ ನೀಡಿದ್ದಾರೆ. ಆದರೂ ಅಶ್ವತ್ಥನಾರಾಯಣಪ್ಪ ನೋಟಿಸ್ ಪಡೆದುಕೊಂಡಿಲ್ಲ. ಹೀಗಾಗಿ ಟವರ್ ನಿರ್ಮಾಣ ಮಾಡ್ತಿದ್ದ ಜಾಗದ ಗೇಟ್ ಗೆ ಅಧಿಕಾರಿಗಳು ನೋಟಿಸ್ ಅಂಟಿಸಿ ಹೋಗಿದ್ದಾರೆ.
ಅನುಮತಿ ಪಡೆಯದೆ ಅಕ್ರಮವಾಗಿ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣ ಮಾಡಬಾರದು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸೋಕೆ ಅಶ್ವತ್ಥನಾರಾಯಣಪ್ಪ ನಿರಾಕರಿಸಿದ್ದಾರೆ.
ಪರಿಸರ ಅಭಿಯಂತರರು ಈ ಬಗ್ಗೆ ಮಾತನಾಡಿ, ನಮಗೆ ಸ್ಥಳೀಯರು ದೂರು ನೀಡಿದ್ರು. ನಾವು ಅಶ್ವತ್ಥನಾರಾಯಣಪ್ಪನವರನ್ನು ಭೇಟಿ ಮಾಡಿ ನೋಟಿಸ್ ನೀಡಲು ಮುಂದಾಗಿದ್ದೇವೆ. ಆದರೆ ಅವರು ನಮಗೆ ನಾನು ನಿವೃತ್ತ ಪೊಲೀಸ್ಅಧಿಕಾರಿ ಅಂತ ಐಡಿ ಕಾರ್ಡ್ ತೋರಿಸಿದ್ರು. ನಿಮ್ಮ ನೋಟಿಸ್ ನನಗೆ ಬೇಡ. ನ್ಯಾಯಾಲಯದಿಂದ ಕೊಡಿಸಿ ಅಂತ ನೋಟಿಸ್ ಪಡೆದುಕೊಂಡಿಲ್ಲ ಎಂದು ಹೇಳಿದರು.