-ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕದಲ್ಲಿ ಸಂಘ ತಲೆ ಹಾಕಲ್ಲ ಎಂದ ಸರಕಾರ್ಯವಾಹ
ಬೆಂಗಳೂರು: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಂವಿಧಾನ ಬಾಹಿರ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕದಲ್ಲಿ ಸಂಘ ತಲೆ ಹಾಕಲ್ಲ ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದರು.
ಬೆಂಗಳೂರಿನ (Bengaluru) ಚನ್ನೇನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ (BJP) ರಾಷ್ಟ್ರಾಧ್ಯಕ್ಷರ ಆಯ್ಕೆ ವಿಚಾರ ಕೇಂದ್ರದ ಬಿಜೆಪಿಯೇ ನೋಡಿಕೊಳ್ಳಲಿದೆ. ರಾಷ್ಟ್ರಾಧ್ಯಕ್ಷರ ನೇಮಕಕ್ಕೂ ಸಂಘಕ್ಕೂ ಸಂಬಂಧ ಇಲ್ಲ. ಬಿಜೆಪಿ ಸಂಘವನ್ನು ಕೇಳಿ ನೇಮಕಾತಿ ಮಾಡಲ್ಲ. ಇನ್ನೂ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ಸಂಘ ಖಂಡಿಸಿದೆ. ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಯಾರಾದರೂ ಹಾಗೆ ಮಾಡಿದರೆ ಅದು ನಮ್ಮ ಸಂವಿಧಾನ ಶಿಲ್ಪಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ:ನಟಿ ರಮೋಲ ಒಂದು ದಿನದ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!
ಇನ್ನೂ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಮುಂದಾಗಿದ್ದ ಆಂಧ್ರಪ್ರದೇಶ (Andhra Pradesh) ಮತ್ತು ಮಹಾರಾಷ್ಟ್ರ (Maharashtra) ರಾಜ್ಯಗಳ ಪ್ರಯತ್ನಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಳ್ಳಿಹಾಕಿವೆ. ಅಂತಹ ಮೀಸಲಾತಿ ಒದಗಿಸಲು ಇರುವ ನಿಬಂಧನೆಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ತಿಳಿಸಿದರು.
ಮಹಾರಾಷ್ಟ್ರ ಹಾಗೂ ಹಿಂದಿನ ಬಿಜೆಪಿ (BJP) ಸರ್ಕಾರದಲ್ಲಿ ಸಚಿವರ ಪಿಎಗಳಾಗಿ ಸಂಘದ ವ್ಯಕ್ತಿಗಳ ನೇಮಕಕ್ಕೆ ಸಿದ್ದರಾಮಯ್ಯ ಟೀಕಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಘ ಯಾರಿಗೂ ಪಿಎಗಳಾಗಿ ನೇಮಿಸಿಕೊಳ್ಳಿ ಎಂದು ಸೂಚನೆ ಕೊಡಲ್ಲ. ಸಂಘದ ಹಿನ್ನೆಲೆಯವರು ಸಚಿವರ ಪಿಎಗಳಾಗುತ್ತಾರೆ. ಅಂದರೆ ಅದು ಅವರ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಮಾತ್ರ. ಅದರಲ್ಲಿ ತಪ್ಪೇನಿಲ್ಲ ಎಂದರು.
ಇನ್ನೂ ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆಗೆ ದಕ್ಷಿಣದ ರಾಜ್ಯಗಳು ಆತಂಕ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾತನಾಡಿ, ಪುನರ್ವಿಂಗಡಣೆ ವಿಚಾರದಲ್ಲಿ ಕೇಂದ್ರ ಇನ್ನೂ ಅಧಿಕೃತವಾಗಿ ಯಾವುದೇ ಕರಡು ಪ್ರಕಟಿಸಿಲ್ಲ. ಈ ಹಂತದಲ್ಲಿ ನಾವು ಏನನ್ನೂ ಹೇಳುವುದಿಲ್ಲ. ಈ ವಿಚಾರದಲ್ಲಿ ಕೇಂದ್ರಕ್ಕೆ ಸಂಘ ಯಾವುದೇ ಸಲಹೆ ಕೊಡುವುದಿಲ್ಲ ಎಂದು ಹೇಳಿದರು.ಇದನ್ನೂ ಓದಿ:ಗಾಜಾದಲ್ಲಿ ಇಸ್ರೇಲ್ ವಾಯುದಾಳಿಗೆ ಹಮಾಸ್ ರಾಜಕೀಯ ನಾಯಕ ಬಲಿ