ಲಕ್ನೋ: 16 ವರ್ಷದ ಮಾನಸಿಕ ಅಸ್ವಸ್ಥ ಬಾಲಕನ ಮರ್ಮಾಂಗಕ್ಕೆ ಇಟ್ಟಿಗೆ ಕಟ್ಟಿ ನೇತಾಡಿಸುವ ಮೂಲಕ ಆತನ ಸಂಬಂಧಿಕರು ಶಿಕ್ಷೆ ನೀಡಿದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಶಹಜಾನ್ಪುರದಲ್ಲಿ ನಡೆದಿದೆ.
ಈ ಘಟನೆ ಮೇ 26ರಂದು ನಡೆದಿದ್ದು, ಈ ಬಗ್ಗೆ ದೂರು ನೀಡಲು ತೆರಳಿದಾಗ ಬಳಿಕ ಬಾಲಕನ ಸಹೋದರಿ ಹಾಗೂ ಆತನ ಕುಟುಂಬಸ್ಥರ ಮೇಲೆ ದಾಳಿ ನಡೆದಿದೆ.
ಘಟನೆ ಕುರಿತು ಬಾಲಕ ತಂದೆ ಹರಿ ರಾಮ್ ಮಾತನಾಡಿ, ನನ್ನ ಮಗ ಸಂದೀಪ್(ಹೆಸರು ಬದಲಾಯಿಸಲಾಗಿದೆ) ಮಾನಸಿಕ ಅಸ್ವಸ್ಥನಾಗಿದ್ದು, ಗ್ರಾಮದ ಕೆಲ ಬಾಲಕರೊಂದಿಗೆ ಕೂಡಿ ಆಟವಾಡುತ್ತಿದ್ದನು. ಈ ವೇಳೆ ಗಲಾಟೆ ನಡೆದಿದೆ. ಪರಿಣಾಮ ಮಗನ ಮೇಲೆ ಸಿಟ್ಟುಗೊಂಡ ನನ್ನ ಕೆಲ ಸಂಬಂಧಿಕರು ಆತನ ಮರ್ಮಾಂಗಕ್ಕೆ ಇಟ್ಟಿಗೆಯನ್ನು ಕಟ್ಟಿ ನೇತಾಡಿಸಿದ್ದಾರೆ. ಅಲ್ಲದೆ ನಂತರ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಈ ವಿಚಾರ ಹರಿದಾಡುತ್ತಿದ್ದಂತೆಯೇ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ದೂರು ದಾಖಲಿಸಲು ಪೊಲೀಸ್ ಠಾಣೆಯತ್ತ ತೆರಳುತ್ತಿದ್ದೆವು. ಈ ವೇಳೆ ಸಂಬಂಧಿಕರು ದೂರು ದಾಖಲಿಸಿದಂತೆ ನಮ್ಮನ್ನು ತಡೆದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಾಲಕನ ಸಹೋದರಿ ಧ್ವನಿ ಮಾತನಾಡಿ, ಘಟನೆ ನಡೆದ ಬಳಿಕ ನಾನು ಹಾಗೂ ನಮ್ಮ ತಾಯಿ ಜೊತೆ ಸಂಬಂಧಿಕರ ಬಳಿ ಯಾಕೆ ಹೀಗೆ ಮಾಡಿದ್ರಿ ಎಂದು ಕೇಲಲು ಹೋದೆವು. ಈ ವೇಳೆ ನಮಗೆ ಹಾಗೂ ಸಂಬಂಧಿಕರ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಅಲ್ಲದೆ ನಮ್ಮ ತಾಯಿ ಮೇಲೆ ಅವರು ಹಲ್ಲೆ ಮಾಡಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ನಾನು ತಾಯಿಯನ್ನು ರಕ್ಷಿಸಲು ಹೋದೆ. ಆಗ ಹಿಂಬಂದಿಯಿಂದ ಬಂದು ಸಂಬಂಧಿಕರು ನನ್ನ ಹಾಗೂ ತಾಯಿಯ ತಲೆಗೆ ಕೋಲಿನಿಂದ ಹೊಡೆದರು ಎಂದು ಕಣ್ಣೀರು ಹಾಕಿದ್ದಾಳೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತೇವೆ. ಅಲ್ಲದೆ ಘಟನೆಯ ಬಗ್ಗೆ ಸತ್ಯಾಸತ್ಯತೆ ಅರಿತುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಯಾದವ್ ಭರವಸೆ ನೀಡಿದ್ದಾರೆ.
ಸದ್ಯ ವೈರಲ್ ಆದ ವಿಡಿಯೋವನ್ನು ನೋಡಿದ್ದೇವೆ. ಹೀಗಾಗಿ ಅದರ ಸತ್ಯಾಸತ್ಯತೆಯನ್ನು ಅರಿತು ತನಿಖೆ ಮುಂದುವರಿಸುತ್ತೇವೆ. ಒಂದು ವೇಳೆ ವಿಡಿಯೋದಲ್ಲಿ ನಡೆದ ಘಟನೆ ಸತ್ಯವಾಗಿದ್ದರೆ ಆರೋಪಿಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಯಾದವ್ ತಿಳಿಸಿದ್ದಾರೆ.
ವೈರಲಾದ ವಿಡಿಯೋ ಕುರಿತು ಮೇ 26ರಂದು ಬಂದಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.