ಚಿಕ್ಕಬಳ್ಳಾಪುರ: ಕ್ಯಾಬ್ ಚಾಲಕನೋರ್ವ ತಿನ್ನುತ್ತಿದ್ದ ಪೊಂಗಲ್ ನಲ್ಲಿ ಹುಳ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ನಡೆದಿದೆ.
ಕೆಐಎಎಲ್ ನ ಕಾರ್ ಪಾರ್ಕಿಂಗ್ ಬಳಿ ಇರುವ ಸತೀಶ್ ಡೈನಿಂಗ್ ಕ್ಯಾಂಟೀನ್ ನಲ್ಲಿ ಕ್ಯಾಬ್ ಚಾಲಕ ಗಣೇಶ್ 50 ರೂ. ಕೊಟ್ಟು ಒಂದು ಪ್ಲೇಟ್ ಪೊಂಗಲ್ ಖರೀದಿಸಿದ್ದಾರೆ. ಪೊಂಗಲ್ ತಿನ್ನುತ್ತಿದ್ದ ವೇಳೆ ಪೊಂಗಲ್ ಜೊತೆಗೆ ತಟ್ಟೆಯಲ್ಲಿ ಹುಳ ಪತ್ತೆಯಾಗಿದೆ. ಇದರಿಂದ ಬೆಚ್ಚಿಬಿದ್ದ ಕ್ಯಾಬ್ ಚಾಲಕ ಗಣೇಶ್, ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿದ್ದಾರೆ.
ವಿಷಯ ತಿಳಿದು ಗುಂಪುಗೂಡಿದ ಕ್ಯಾಬ್ ಚಾಲಕರು ಕ್ಯಾಂಟೀನ್ ಮಾಲೀಕ ಹಾಗೂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಕೊಡ್ತಿರೋದಲ್ಲದೇ ಒಂದು ಪ್ಲೇಟ್ ಪೊಂಗಲ್ ಗೆ 50 ರೂ. ವಸೂಲಿ ಮಾಡಿ ಹಣ ದೋಚುತ್ತಿದ್ದಾರೆ ಅಂತ ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಅಡುಗೆ ಕೊಠಡಿಗೆ ತೆರಳಿ ಕ್ಯಾಬ್ ಚಾಲಕರು ಪರಿಶೀಲನೆ ನಡೆಸಿದ್ದು, ಕೊಳೆತ ಟೊಮೆಟೋ, ತರಕಾರಿಗಳು ಸಹ ಪತ್ತೆಯಾಗಿವೆ. ಇದರಿಂದ ಮತ್ತಷ್ಟು ಕೆಂಡಾಮಂಡಲರಾಗಿರೋ ಕ್ಯಾಬ್ ಚಾಲಕರು ಕ್ಯಾಂಟೀನ್ ಮುಚ್ಚಬೇಕು ಹಾಗೂ ಬೇರೆಯವರಿಗೆ ಕ್ಯಾಂಟೀನ್ ನಡೆಸಲು ಅವಕಾಶ ಮಾಡಿಕೊಡಬೇಕು ಅಂತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv