ಮಂಗಳೂರು: ಕಳೆದ ಮೂರು ದಿನಗಳಲ್ಲಿ ಕರಾವಳಿಯಲ್ಲಿ ಸುರಿಯುತ್ತಿದ್ದ ಮಳೆರಾಯ ಇಂದು ಕಾಣೆಯಾಗಿದ್ದಾನೆ. ಬೆಳಗ್ಗಿನಿಂದ ಮಂಗಳೂರು ಸೇರಿದಂತೆ ಕರಾವಳಿಯ ತೀರ ಪ್ರದೇಶದಲ್ಲಿ ಮೋಡದ ವಾತಾವರಣ ನೆಲೆಸಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ.
ಎರಡು ದಿನಗಳ ಭರ್ಜರಿ ಮಳೆಯಿಂದಾಗಿ ನದಿಗಳು ತುಂಬಿ ಹರಿದಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಕೃಷಿ ಭೂಮಿಯನ್ನು ಹಾನಿ ಮಾಡಿದೆ. ಮಂಗಳೂರಿನ ಕಿನ್ನಿಗೋಳಿ ಪರಿಸರದ ಹಲವೆಡೆ ನಂದಿನಿ ನದಿಯಲ್ಲಿ ಪ್ರವಾಹ ಉಂಟಾಗಿ ಕೃಷಿ ಭೂಮಿಗೆ ನೀರು ನುಗ್ಗಿತ್ತು. ಇಂದು ಮಳೆ ಕಡಿಮೆಯಾದರೂ ಅಲ್ಲಿನ ನೆರೆ ಪರಿಸ್ಥಿತಿ ಕಡಿಮೆಯಾಗಿಲ್ಲ.
ಅಡಿಕೆ, ತೆಂಗಿನ ತೋಟಗಳಲ್ಲಿ ನೀರು ನಿಂತಿದ್ದು, ಕೃಷಿಕರು ಹಾನಿ ಭೀತಿ ಎದುರಿಸುತ್ತಿದ್ದಾರೆ. ಫಲ್ಗುಣಿ ನದಿಯೂ ತುಂಬಿ ಹರಿಯುತ್ತಿದ್ದು, ಗುರುಪುರದಲ್ಲಿ ನೆರೆ ಭೀತಿ ಎದುರಾಗಿದೆ. ಆದರೆ ಪಶ್ಚಿಮ ಘಟ್ಟಗಳ ಭಾಗದಲ್ಲಿ ಅಷ್ಟೇನು ಮಳೆಯಾಗದ ಕಾರಣ ನೇತ್ರಾವತಿ ನದಿಯಲ್ಲಿ ಇನ್ನೂ ಪ್ರವಾಹ ಭೀತಿ ಎದುರಾಗಿಲ್ಲ.
ಉಪ್ಪಿನಂಗಡಿಯ ಕುಮಾರಧಾರ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿಲ್ಲ. ಹೀಗಾಗಿ ಜೀವನದಿ ನೇತ್ರಾವತಿ ಮಳೆಗಾಲದಲ್ಲಿಯೇ ಸೊರಗಿ ಹೋದಳೇ ಅನ್ನುವ ಆತಂಕ ಎದುರಾಗಿದೆ. ಕಳೆದು ಮೂವರು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಇಂದು ಮಳೆ ಕಡಿಮೆಯಾಗಿರುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.