– ಕುಡಿಯುವ ನೀರಿನ ಅನುದಾನ ಹೆಚ್ಚಿಸಲು ಒತ್ತಾಯ
ರಾಯಚೂರು: ಜಲಧಾರೆ ಯೋಜನೆಗೆ ರಾಯಚೂರು, ಮಂಡ್ಯ ಹಾಗೂ ಕೋಲಾರ ಜಿಲ್ಲೆಯನ್ನು ಸೇರಿಸಲಾಗಿದೆ. ನದಿ ಮೂಲದ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಹೀಗಾಗಿ 1300 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ. ನೀಲನಕ್ಷೆ ಸಿದ್ಧವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಜೊತೆ ಕೋಲಾರ ಮತ್ತು ಮಂಡ್ಯ ಜಲಧಾರೆ ಯೋಜನೆಗೆ ಸೇರಿವೆ. ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿಮೆ ಇದೆ. ಕೇಂದ್ರ ಆಯವ್ಯಯದಲ್ಲಿ ಉದ್ಯೋಗ ಖಾತ್ರಿಗೆ 85 ಸಾವಿರ ಕೋಟಿ ರೂ ಮೀಸಲಿಡಬೇಕು ಎಂದಿದ್ದಾರೆ.
ನರೇಗಾ ಯೋಜನೆ ಹಣವನ್ನು ಸರಿಯಾಗಿ ನೀಡುತ್ತಿಲ್ಲ. ಹಣ ಬಾರದೇ ಇರುವುದರಿಂದ ಜನ ಗುಳೆ ಹೋಗುತ್ತಿದ್ದಾರೆ. ಕೇಂದ್ರದಿಂದ ಗ್ರಾಮೀಣ ರಸ್ತೆಗಳಿಗೆ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕುಡಿಯುವ ನೀರಿಗಾಗಿ ನೀಡುವ ಅನುದಾನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಐದು ವರ್ಷದಲ್ಲಿ ಕಡಿಮೆ ಅನುದಾನ ನೀಡಲಾಗಿದೆ. ಕುಡಿಯುವ ನೀರಿಗೆ ಈ ಹಿಂದೆ ಕೇಂದ್ರದಿಂದ ಶೇ.70 ರಷ್ಟು ಅನುದಾನ ಬರುತ್ತಿದೆ. ಈಗ ಕೇವಲ ಶೇ 12 ರಷ್ಟು ಅನುದಾನ ಬಿಡುಗಡೆಯಾಗುತ್ತಿದೆ ಎಂದರು.