– ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರ ಓಡಾಟಕ್ಕೆ ಬೀಳುತ್ತಿಲ್ಲ ಕಡಿವಾಣ
ರಾಯಚೂರು: ಬೆಂಗಳೂರಿನಲ್ಲಿ ಕಟ್ಟಡ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಜಿಲ್ಲೆಯ ಮಸ್ಕಿ ತಾಲೂಕಿಗೆ ಬಿಟ್ಟು ವಾಪಸ್ ಹೋಗುತ್ತಿದ್ದ ಟೆಂಪೋ ಪಲ್ಟಿಯಾಗಿ ತುಂಗಭದ್ರಾ ಉಪ ಕಾಲುವೆಗೆ ಬಿದ್ದಿದೆ.
ಮಸ್ಕಿ ತಾಲೂಕಿನ ರಂಗಾಪುರ ಬಳಿ ಘಟನೆ ನಡೆದಿದೆ.ಬೆಂಗಳೂರಿಗೆ ಗುಳೆ ಹೋಗಿದ್ದ ಕಾರ್ಮಿಕರನ್ನು ಬಿಟ್ಟು ಹೋಗಲು ಬಂದಿದ್ದ ವಾಹನ, ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೊರೊನಾ ಭೀತಿ ಹಾಗೂ ಲಾಕ್ಡೌನ್ ಹಿನ್ನಲೆ ಬೆಂಗಳೂರಿನಿಂದ ಗ್ರಾಮಗಳಿಗೆ ಕೂಲಿ ಕಾರ್ಮಿಕರು ಟೆಂಪೋ ಮಾಡಿಕೊಂಡು ಮರಳಿದ್ದಾರೆ. ಆದರೆ ವಾಪಸ್ ಹೋಗಬೇಕಿದ್ದ ಟೆಂಪೋ ಕಾಲುವೆಗೆ ಬಿದ್ದಿದೆ.
ಕೂಲಿ ಕಾರ್ಮಿಕರು ವಾಪಸ್ ಬರುವ ಭರಾಟೆಯಲ್ಲಿ ವಾಹನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಮಕ್ಕಳನ್ನು ಕುರಿಗಳ ಹಾಗೆ ತುಂಬಿಕೊಂಡು ಬರಲಾಗುತ್ತಿದೆ. ಅಲ್ಲದೆ ಗಾಡಿಗಳಿಗೆ ನೇತಾಡಿಕೊಂಡು ಜನ ಬರುತ್ತಿದ್ದಾರೆ. ಪೊಲೀಸರು ಎಷ್ಟೇ ವಾಹನಗಳನ್ನು ತಡೆದರೂ ಜನರ ಹಾಗೂ ಕೂಲಿ ಕಾರ್ಮಿಕರ ಓಡಾಟ ಇನ್ನೂ ನಿಂತಿಲ್ಲ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.