ರಾಯಚೂರು: ಇಂದು ಮಾಧ್ವ ಸಮಾಜಕ್ಕೆ ಅತ್ಯಂತ ಕರಾಳದಿನ. ರಾತ್ರೋ ರಾತ್ರಿ ವ್ಯಾಸರಾಜರ ವೃಂದಾವನವನ್ನು ಅಗೆದು ಹಾಕಿದ್ದು ಖಂಡನೀಯ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಅನೆಗೊಂದಿಯಲ್ಲಿನ ವ್ಯಾಸರಾಜರ ವೃಂದಾವನವನ್ನು ಧ್ವಂಸ ಮಾಡಿದ ಹಿನ್ನೆಲೆಯಲ್ಲಿ ಇಂದು ಮಾತನಾಡಿದ ಅವರು, ತುಂಗಭದ್ರಾ ನದಿಯ ದಡದಲ್ಲಿರುವ ವಿವಾದಿತ ಪ್ರದೇಶದಲ್ಲಿರುವ ವೃಂದಾವನ ಧ್ವಂಸ ಮಾಡಿರುವುದಕ್ಕೆ ರಕ್ತ ಕುದಿಯುತ್ತಿದೆ. ಇದನ್ನು ಪ್ರತಿಯೊಬ್ಬರು ಬೇಧ ಭಾವವಿಲ್ಲದೇ ಖಂಡಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಗ್ರವಾಗಿ ಸೂಕ್ತವಾದ ತನಿಖೆ ಮಾಡಿ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಆಗ್ರಹ ಮಾಡಿದ ಸ್ವಾಮೀಜಿ, ಈ ವಿಚಾರದಲ್ಲಿ ಭೇದ ಮರೆತು ಎಲ್ಲರೂ ಒಂದಾಗುವಂತೆ ಎಲ್ಲಾ ಮಠಾಧೀಶರಲ್ಲಿ ಮನವಿ ಮಾಡಿಕೊಂಡರು.
ವೃಂದಾವನ ಮರು ನಿರ್ಮಾಣವನ್ನು ಎಲ್ಲರೂ ಒಟ್ಟಾಗಿ ಮಾಡಲು ಸಹಕಾರ ಕೋರಿದ ಸ್ವಾಮೀಜಿ, ಮಂತ್ರಾಲಯದಲ್ಲಿ ಪೂಜೆ ಮುಗಿಸಿ ಊಟವನ್ನು ಮಾಡದೇ ಕೋಲಾರಕ್ಕೆ ಹೊರಟಿದ್ದಾರೆ. ಮಧ್ಯರಾತ್ರಿ ನವವೃಂದಾವನ ಅಗೆದು ಹಾಕಿದ್ದು, ನಿಧಿಗಾಗಿ ಅಗೆದು ಹಾಕಿರುವ ಶಂಕೆ ವ್ಯಕ್ತವಾಗಿದೆ.