– ಸಾರ್ವಜನಿಕರಿಗೆ ವಿನಾಕಾರಣ ಕಚೇರಿ ಒಳಗೆ ಪ್ರವೇಶವಿಲ್ಲ
ರಾಯಚೂರು: ಕೊರೊನಾ ವೈರಸ್ ಭೀತಿಯಿಂದ ರಾಯಚೂರಿನಲ್ಲಿ ಸರ್ಕಾರಿ ಅಧಿಕಾರಿಗಳು ಬೀದಿಗೆ ಬರುವಂತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಸಾರ್ವಜನಿಕ ಸಂಪರ್ಕ ಇರುವ ಜಿಲ್ಲಾಧಿಕಾರಿ ಕಚೇರಿಯ ಆವಾಕ, ಜಾವಕ ವಿಭಾಗಗಳನ್ನ ಕಚೇರಿಯಿಂದ ಹೊರಕ್ಕೆ ಇಡಲಾಗಿದೆ. ವಾಹನ ಪಾರ್ಕಿಂಗ್ ಬಳಿ ಟೇಬಲ್ ಹಾಕಿಕೊಂಡು ಸಿಬ್ಬಂದಿ ಕುಳಿತಿದ್ದಾರೆ.
ರಸ್ತೆಯಲ್ಲೆ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿರುವ ಸಿಬ್ಬಂದಿ ಮರದ ಕೆಳಗೆ ಫೈಲ್ ಗಳನ್ನ ಹಿಡಿದು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಆದೇಶದ ಮೇರೆಗೆ ಎರಡು ವಿಭಾಗ ಕಚೇರಿಯಿಂದ ಹೊರಗೆ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಕಚೇರಿ ಆವರಣದಲ್ಲಿ ಹೆಚ್ಚು ಜನ ನಿಲ್ಲದಂತೆ ಸೂಚನೆ ನೀಡಲಾಗಿದ್ದು, ಗುಂಪುಗುಂಪಾಗಿ ಕಚೇರಿಗೆ ಬರುವ ಜನರನ್ನ ಪೊಲೀಸ್ ಸಿಬ್ಬಂದಿ ಚದುರಿಸುತ್ತಿದ್ದಾರೆ. ವಾಹನಗಳನ್ನ ಒಳಬರದಂತೆ ತಡೆಹಿಡಿಯುತ್ತಿದ್ದಾರೆ.
ಸಂತೆ, ಜಾತ್ರೆ, ಉರುಸುಗಳನ್ನು ಬಂದ್ ಮಾಡಲಾಗಿದೆ. ಔಷಧಿ ಅಂಗಡಿಯಲ್ಲಿ ಹ್ಯಾಂಡ್ ಸೈನೆಟೈಸ್ ಹಾಗೂ ಮಾಸ್ಕ್ ಹೆಚ್ಚಿನ ದರ ಮಾರಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಅಂತ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಎನ್ಡಿಆರ್ಆಫ್ ನಿಂದ ಹಣ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸೋಂಕಿತರ ಆರೋಗ್ಯಕ್ಕೆ ಬೇಕಾಗುವ ವಸ್ತು ಖರೀದಿಸಲು ಸೂಚಿಸಲಾಗಿದೆ.
ಸರ್ಕಾರಿ ಕಚೇರಿಗಳಿಗೆ ಅನಾವಶ್ಯಕವಾಗಿ ಬರೋದು ಬೇಡ. ಡಿಸಿ ಕಚೇರಿಯಲ್ಲಿ ಆವಕ ಸಿಬ್ಬಂದಿಯನ್ನು ಹೊರಗಡೆ ನಿಯೋಜಿಸಲಾಗಿದೆ. ಬಾರ್ ಹಾಗೂ ರೆಸ್ಟೋರೆಂಟ್ ಇಂದಿನಿಂದ ಬಂದ್ ಮಾಡಲಾಗುವುದು. ಆಧಾರ್ ನೋಂದಣಿ ಕೇಂದ್ರಗಳನ್ನು ಒಂದು ವಾರ ಬಂದ್ ಮಾಡಲಾಗುವುದು. ಪ್ರತಿಭಟನೆ ಕೊಡುವವರು ಕಡಿಮೆ ಜನರು ಬಂದು ಮನವಿ ಕೊಡಿ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.