ಶಿಮ್ಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅಧಿವೇಶನದಲ್ಲಿ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾಗವಹಿಸುವ ವರದಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಿಸಿದೆ.
ಬಿಸಿಸಿಐ ಮಾಧ್ಯಮ ಮ್ಯಾನೇಜರ್ ಮೌಲಿನ್ ಪಾರೀಖ್ ಪ್ರತಿಕ್ರಿಯಿಸಿ, ದ್ರಾವಿಡ್ ಭಾಗವಹಿಸುತ್ತಾರೆ ಎಂಬ ಸುದ್ದಿ ಸುಳ್ಳು ವರದಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ
ಧರ್ಮಶಾಲಾ ಕ್ಷೇತ್ರದ ಬಿಜೆಪಿ ಶಾಸಕ ವಿಶಾಲ್ ನಹೇರಿಯಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದ್ರಾವಿಡ್ ಭಾಗವಹಿಸುವಿಕೆಯನ್ನು ಬಳಸಿಕೊಂಡು ಯುವಕರು ರಾಜಕೀಯದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಮುನ್ನಡೆಯಬಹುದು ಎಂಬ ಸಂದೇಶವನ್ನು ರವಾನಿಸಿದ್ದರು.
ಮೂರು ದಿನಗಳ ಅಧಿವೇಶನದಲ್ಲಿ ರಾಜ್ಯದ ಸಿಎಂ ಜೈ ರಾಮ್ ಠಾಕೂರ್ ಕೂಡ ಭಾಗವಹಿಸಲಿದ್ದಾರೆ. ದೇಶದಾದ್ಯಂತ 139 ಪ್ರತಿನಿಧಿಗಳು ಅಧಿವೇಶನದಲ್ಲಿ ತಮ್ಮ ಉಪಸ್ಥಿತಿಯನ್ನು ನೋಂದಾಯಿಸಲಿದ್ದಾರೆ. ಮೇ 12 ರಿಂದ 15ರವರೆಗೆ ಧರ್ಮಶಾಲಾದಲ್ಲಿ 4 ದಿನಗಳ ಕಾಲ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ ಎಂದು ತಿಳಿಸಿದ್ದರು.
ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಮತ್ತು ಹಿಮಾಚಲ ಪ್ರದೇಶದ ನಾಯಕತ್ವ ಭಾಗಿಯಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನೆ ಸಚಿವರು, ಕೇಂದ್ರ ಸಚಿವರು ಕೂಡಾ ಭಾಗವಹಿಸಲಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ
ಈ ವರ್ಷ ನಡೆಯಲಿರುವ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ಮುನ್ನ ಈ ಅಧಿವೇಶನ ನಡೆಯಲಿದೆ. 2017ರ ಅಸೆಂಬ್ಲಿ ಚುನಾವಣಾ ಫಲಿತಾಂಶದಲ್ಲಿ, ಬಿಜೆಪಿಯು 44 ಸ್ಥಾನಗಳನ್ನು ಗೆದ್ದುಕೊಂಡಿತ್ತು.