ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಬಂಡಾಯವನ್ನು ಶಮನ ಮಾಡುವತ್ತ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದು, ದಿನಕ್ಕೊಂದು ಕ್ಷೇತ್ರಕ್ಕೆ ಭೇಟಿ ನೀಡಿ ಸಂಧಾನ ಕಾರ್ಯ ಮಾಡುತ್ತಿದ್ದಾರೆ.
ಇಂದು ಕಂದಾಯ ಸಚಿವ ಆರ್.ಅಶೋಕ್ ಕೆ.ಆರ್.ಪುರಕ್ಕೆ ಭೇಟಿ ನೀಡಿದ್ದು, ಭೈರತಿ ಬಸವರಾಜ್ ಹಾಗೂ ನಂದೀಶ್ ರೆಡ್ಡಿ ನಡುವಿನ ಅಸಮಾಧನವನ್ನು ತಿಳಿಸಿಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೆ.ಆರ್.ಪುರಕ್ಕೆ ಭೈರತಿ- ನಂದೀಶ್ ರೆಡ್ಡಿ ಜೋಡೆತ್ತು. ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾರ್ಯಕರ್ತರೇ ಇಲ್ಲ. ಬಸವರಾಜ್ ಅವರನ್ನು ಕರೆದುಕೊಂಡು ಬಂದಿದ್ದು ನಾನೇ ಮುಂಬೈನಲ್ಲಿ ಅನರ್ಹರ ಕಾವಲಿಗಿದ್ದಿದ್ದು ಭೈರತಿ ಬಸವರಾಜ್ ಎಂದರು.
ನಂದೀಶ್ ರೆಡ್ಡಿ ನನ್ನ ಶಿಷ್ಯ, ಅವರ ಮನೆಯಲ್ಲಿ ಚಾಯ್ ಪೇ ಚರ್ಚಾ ಮಾಡುತ್ತೇವೆ. ಭೈರತಿ ಬಸವರಾಜ್ ಸಚಿವರಾಗುತ್ತಾರೆ. ಹಿಂದೆ ನಡೆದ ಘಟನೆಯನ್ನು ಮರೆಯಿರಿ. ದೇಶ, ರಾಜ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ಕಮಲ ಗೆಲ್ಲಿಸಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಕಾರ್ಪೋರೇಟರ್ ಗಳಿಗೂ ಸಮನಾದ ಗೌರವ ಇರುತ್ತದೆ. ಬಸವ-ನಂದಿಯರನ್ನು ಹೊಲ ಬೆಳೆಯೋಕೆ ಬಿಡುತ್ತಿದ್ದೇವೆ ಎಂದು ಉಲ್ಲೇಖಿಸಿದರು.
ಈ ಮೂಲಕ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಬಂಡಾಯವು ಶಮನವಾದಂತಾಗಿದ್ದು, ನಂದೀಶ್ ರೆಡ್ಡಿ ನಿವಾಸದಲ್ಲಿ ಸಂಧಾನ ಸಭೆ ನಡೆಸಿ ಸಚಿವ ಆರ್.ಅಶೋಕ್ ಬಂಡಾಯ ಶಮನಗೊಳಿಸಿದ್ದಾರೆ. ಭೈರತಿ ಬಸವರಾಜ್, ನಂದೀಶ್ ರೆಡ್ಡಿಯನ್ನು ಒಟ್ಟಿಗೆ ಕೂರಿಸಿ ಆರ್.ಅಶೋಕ್ ಸಂಧಾನ ಮಾಡಿದ್ದಾರೆ. ಅಲ್ಲದೆ ಒಟ್ಟಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಸಂಧಾನದ ನಂತರ ಭೈರತಿ ಬಸವರಾಜ್ ಪರ ಕೆಲಸ ಮಾಡಲು ನಂದೀಶ್ ರೆಡ್ಡಿ ಒಪ್ಪಿಕೊಂಡಿದ್ದಾರೆ. ಬಿಎಂಟಿಸಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದ ಬಳಿಕವೂ ನಂದೀಶ್ ರೆಡ್ಡಿ ಮುನಿಸು ಮುಂದುವರಿಸಿದ್ದರು.