ಪುನೀತ್ ರಾಜ್ ಕುಮಾರ್ ನಿಧನವನ್ನು ಇನ್ನೂ ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಅಗಲಿ ಎಂಟು ತಿಂಗಳು ಕಳೆದರೂ, ಅಭಿಮಾನಿಗಳು ಇನ್ನೂ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಕಾಣೆಯಾಗಿದ್ದಾರೆ’ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು ಎಂದು ಭಿತ್ತಿ ಪತ್ರವನ್ನು ಅಂಟಿಸುತ್ತಿದ್ದಾರೆ.
ಹುಡುಗನೊಬ್ಬ ಭಿತ್ತಿ ಪತ್ರವನ್ನು ಗೋಡೆಗೆ ಅಂಟಿಸಿ ಕಾಣೆಯಾಗಿರುವ ತಮ್ಮ ನೆಚ್ಚಿನ ನಟನನ್ನು ಹುಡುಕಿಕೊಡಿ ಎಂದು ಕೇಳುವ ವಿಡಿಯೋ ಕೂಡ ವೈರಲ್ ಆಗಿದೆ. ಹೀಗೆ ಅಪ್ಪು ಅವರನ್ನು ಹುಡುಕುವ ಪ್ರಯತ್ನವನ್ನು ಇನ್ನೂ ಅಭಿಮಾನಿಗಳು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅಪ್ಪು ನಮ್ಮಿಂದ ಅಗಲಿಲ್ಲ, ಅಗಲುವುದೂ ಇಲ್ಲ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್
ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ಪುನೀತ್ ಪುಣ್ಯಭೂಮಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅಲ್ಲಲ್ಲಿ ನಿತ್ಯವೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಊರಿಗೆ, ಬೀದಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನೂ ಇಟ್ಟಿದ್ದಾರೆ. ಹೀಗೆ ಪುನೀತ್ ಅವರನ್ನು ತಮಗಿಷ್ಟ ಬಂದಂತೆ ಆರಾಧಿಸುತ್ತಿದ್ದಾರೆ.