ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕೃಷ್ಣಾ ನದಿಗೆ ನೀರಿನ ಒಳಹರಿವು ಹೆಚ್ಚುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ-ಉಗಾರಖುರ್ದ್ ಸಂಪರ್ಕಿಸುವ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿರುವ ಕುಡಚಿ ಸೇತುವೆ ಮೇಲೆ ಈಗಾಗಲೇ ಸುಮಾರು ಒಂದು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ನಿತ್ಯ ನೂರಾರು ಬಸ್ ಹಾಗೂ ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿದರೆ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಸದ್ಯ ಬೈಕ್ ಹಾಗೂ ಕಾರುಗಳು ಮಾತ್ರ ಎಚ್ಚರಿಕೆಯಿಂದ ಸಂಚರಿಸುತ್ತಿವೆ. ಪರಿಸ್ಥಿತಿ ಹದಗೆಟ್ಟರೆ ಸೇತುವೆ ಬಂದ್ ಮಾಡಲು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ – ವಾಕಿಂಗ್ಗೆ ಬಂದಿದ್ದವರಿಗೆ ದರ್ಶನ, ಪಾರ್ಕ್ನಿಂದ ಎದ್ನೋ ಬಿದ್ನೋ ಅಂತ ಓಡಿದ ಜನ
ಸೇತುವೆ ಬಂದ್ ಆದರೆ ವಾಹನ ಸವಾರರು ಸುಮಾರು 50 ಕಿಲೋಮೀಟರ್ ಸುತ್ತುವರಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಸದ್ಯ ಕೃಷ್ಣಾ ನದಿಗೆ 1.40 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 8 ಕೆಳ ಹಂತದ ಸೇತುವೆಗಳು ಈಗಾಗಲೇ ಜಲಾವೃತವಾಗಿವೆ.ಇದನ್ನೂ ಓದಿ: ಫುಟ್ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ – ಸಚಿವ ಕೃಷ್ಣ ಬೈರೇಗೌಡ
