ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂಬ ಬಹುಕಾಲದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾದಂತೆ ತೋರುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂದು ಕರೆಯಲಾಗುವ ಮೀಸಲಾತಿ ಕಾನೂನಿನ ತಿದ್ದುಪಡಿಗಳನ್ನು ಅಂಗೀಕರಿಸಲು ಎಲ್ಲರೂ ಒಂದಾಗಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ. ಇದೇ ಏ.16ರಿಂದ 18ರ ವರೆಗೆ ನಡೆಯುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ವಿಚಾರವನ್ನೂ ಚರ್ಚೆಗೆ ಇಡಲಾಗಿದೆ. ಮಹಿಳಾ ಮೀಸಲಾತಿಯನ್ನು (Women’s Reservation) 2029ರ ಲೋಕಸಭಾ ಚುನಾವಣೆಯಿಂದಲೇ ಜಾರಿಗೆ ತರಲು ನಾರಿ ಶಕ್ತಿ ವಂದನ್ ಅಧಿನಿಯಮದಲ್ಲಿ ಬದಲಾವಣೆಗಳ ಅಗತ್ಯವಿತ್ತು. ಆದ್ದರಿಂದ ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿಗಳನ್ನು ಅಂಗೀಕರಿಸಲು ಈ ವಿಶೇಷ ಅಧಿವೇಶನ ನಡೆಸುತ್ತಿದೆ.
ಏನಿದು ಮಹಿಳಾ ಮೀಸಲಾತಿ? ಕಾಯ್ದೆ ಜಾರಿಯಾದರೆ ರಾಜಕೀಯದಲ್ಲಿ ಮಹಿಳೆಯರಿಗೆ ಸಿಗುವ ಪ್ರಾತಿನಿಧ್ಯ ಏನು? ಮೀಸಲಾತಿ ಪ್ರಕ್ರಿಯೆ ಈಗ ಯಾವ ಹಂತದಲ್ಲಿದೆ? ಜಾರಿಗೆ ಕೇಂದ್ರ ಕೈಗೊಂಡಿರುವ ಕ್ರಮವೇನು ಎಂಬ ಪ್ರಶ್ನೆಗಳಿಗೆ ಸಂಕ್ಷಿಪ್ತ ವಿವರ ಇಲ್ಲಿದೆ.
ಬ್ರಿಟಿಷ್ ಪ್ರಧಾನಿಗೆ ಪತ್ರ
ಭಾರತದಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿಯ ವಿಷಯವು ಭಾರತೀಯ ರಾಷ್ಟ್ರೀಯ ಚಳವಳಿಯ ದಿನಗಳಿಂದಲೂ ಆಳವಾಗಿ ಬೇರೂರಿರುವ ಇತಿಹಾಸವನ್ನು ಹೊಂದಿದೆ. 1931 ರಲ್ಲಿ, ಪ್ರಮುಖ ನಾಯಕಿಯರಾದ ಬೇಗಂ ಶಾ ನವಾಜ್ ಮತ್ತು ಸರೋಜಿನಿ ನಾಯ್ಡು ಅವರು ಆಗಿನ ಬ್ರಿಟಿಷ್ ಪ್ರಧಾನಿಗೆ, ‘ಭಾರತೀಯ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ’ ನೀಡಬೇಕೆಂದು ಪತ್ರ ಬರೆದಿದ್ದರು. ಇದನ್ನೂ ಓದಿ: ಇದು 21ನೇ ಶತಮಾನದ ಅತ್ಯಂತ ದೊಡ್ಡ ನಿರ್ಧಾರ: ಮಹಿಳಾ ಮೀಸಲಾತಿಯನ್ನು ಹಾಡಿ ಹೊಗಳಿದ ಮೋದಿ

1988 ರ ರಾಷ್ಟ್ರೀಯ ದೃಷ್ಟಿಕೋನ ಯೋಜನೆ
ಮಹಿಳೆಯರಿಗಾಗಿ ರಾಷ್ಟ್ರೀಯ ದೃಷ್ಟಿಕೋನ ಯೋಜನೆಯು ಪಂಚಾಯತ್ನಿಂದ ಸಂಸತ್ತಿನವರೆಗೆ ಆಡಳಿತದ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿತು. ಪರಿಣಾಮವಾಗಿ, ಸಂವಿಧಾನದ 73 ನೇ ಮತ್ತು 74 ನೇ ತಿದ್ದುಪಡಿಗಳನ್ನು ಜಾರಿಗೆ ತರಲಾಯಿತು. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳು ಮತ್ತು ವಿವಿಧ ಹಂತಗಳಲ್ಲಿ ಅಧ್ಯಕ್ಷರ ಕಚೇರಿಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಡ್ಡಾಯಗೊಳಿಸಲಾಯಿತು.
ಮಹಿಳಾ ಮೀಸಲಾತಿ ಮಸೂದೆ
ಮಹಿಳಾ ಮೀಸಲಾತಿ ಮಸೂದೆಯನ್ನು 1996 ರಲ್ಲಿ ಸಂಸತ್ತಿನಲ್ಲಿ ಮೊದಲು ಪರಿಚಯಿಸಲಾಯಿತು. ಹೆಚ್.ಡಿ.ದೇವೇಗೌಡರ ಸರ್ಕಾರ ಮೊದಲ ಬಾರಿಗೆ ಮಸೂದೆ ಮಂಡಿಸಿತು. ಆದರೆ, ಲೋಕಸಭೆ ವಿಸರ್ಜನೆ ಆದ ಕಾರಣ ಮಸೂದೆ ಬಿದ್ದು ಹೋಯಿತು. ಇದನ್ನೂ ಓದಿ: 33% ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಕೋರಿದ ಮೋದಿ – ಸರ್ವಪಕ್ಷ ಸಭೆಗೆ ಖರ್ಗೆ ಆಗ್ರಹ
ಶೇ.33 ಮೀಸಲಾತಿ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಗುರಿ ಹೊಂದಲಾಗಿದೆ.
ಎನ್ಡಿಎ ಸರ್ಕಾರದಿಂದ 4 ಸಲ ಮಸೂದೆ ಮಂಡನೆ
1998ರಿಂದ 2003ರ ನಡುವೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮೀಸಲಾತಿ ಮಸೂದೆಯನ್ನು 4 ಬಾರಿ ಸಂಸತ್ನಲ್ಲಿ ಮಂಡಿಸಿತು. ಪಕ್ಷಗಳಲ್ಲಿ ಒಮ್ಮತ ಇಲ್ಲದ್ದರಿಂದ ಮಸೂದೆ ಅಂಗೀಕಾರ ಆಗಲಿಲ್ಲ.
ಯುಪಿಎ ಅವಧಿಯಲ್ಲಿ ಆಗಿದ್ದೇನು?
ಯುಪಿಎ ಸರ್ಕಾರ 2008ರಲ್ಲಿ ಮೊದಲಿಗೆ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿತ್ತು. ಚರ್ಚೆಯ ಬಳಿಕ ಸಂಸದೀಯ ಸ್ಥಾಯಿ ಸಮಿತಿಗೆ ಮಸೂದೆ ಒಪ್ಪಿಸಲಾಗಿತ್ತು. ಲೋಕಸಭೆ ಮುಗಿಯೋ ವರೆಗೂ ವರದಿ ಬರಲಿಲ್ಲ. ಹೀಗಾಗಿ, ಮಸೂದೆ ಬಿದ್ದು ಹೋಯಿತು.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಸೂದೆ
2021ರಲ್ಲಿ ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟವು ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿತು. ಲೋಕಸಭೆಯಲ್ಲಿ ಮಸೂದೆ ಮಂಡನೆಗೆ ನಿರ್ದೇಶನ ಕೋರಿ ಮನವಿ ಮಾಡಲಾಗಿತ್ತು.
ಸುಪ್ರೀಂಗೆ ಬಾರದ ಪ್ರತಿಕ್ರಿಯೆ
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2 ಬಾರಿ ಸೂಚನೆ ನೀಡಿದ್ದರೂ 2 ವರ್ಷ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ನಾರಿ ಶಕ್ತಿ ವಂದನ್ ಅಧಿನಿಯಮ
ಆರು ವಿಫಲ ಪ್ರಯತ್ನಗಳ ನಂತರ, ಅಂತಿಮವಾಗಿ 2023ರ ಸೆಪ್ಟೆಂಬರ್ನಲ್ಲಿ ಇದನ್ನು ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂದು ಅಂಗೀಕರಿಸಲಾಯಿತು.
ಸಂವಿಧಾನಕ್ಕೆ ತಿದ್ದುಪಡಿ
ಮಹಿಳೆಯರಿಗೆ 33% ಮೀಸಲಾತಿ ನೀಡುವ ನಿಯಮವನ್ನು 2023ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ತರಲಾಗಿತ್ತು.
ಕೇಂದ್ರ ಹೇಳಿದ್ದೇನು?
2027ರಲ್ಲಿ ನಡೆಯಲಿರುವ ಜನಗಣತಿ ಆಧಾರದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ಜನಗಣತಿ ಮಾಹಿತಿ ಪಡೆಯಲು 2030ರ ವರೆಗೆ ಕಾಯಬೇಕು. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
2029ಕ್ಕೆ ಲೋಕಸಭಾ ಚುನಾವಣೆ
ಬರುವ 2029ಕ್ಕೆ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, 2011ರ ಜನಗಣತಿಯ ದತ್ತಾಂಶದ ಆಧಾರದಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಕೇಂದ್ರ ಚಿಂತನೆ ನಡೆಸಿದೆ. ಅದಕ್ಕಾಗಿ ಸಂವಿಧಾನ ತಿದ್ದುಪಡಿ ಅಗತ್ಯವಿದೆ.
543 ಸ್ಥಾನಗಳು 816ಕ್ಕೆ ಏರಿಕೆ
ಕಾಯ್ದೆ ಜಾರಿಗೆ ಬಂದರೆ, ಲೋಕಸಭಾ ಕ್ಷೇತ್ರಗಳ ಸಂಖ್ಯೆ 50% ಹೆಚ್ಚಲಿದೆ. ಪ್ರಸ್ತುತ 543 ಸ್ಥಾನಗಳು 816ಕ್ಕೆ ಏರಿಕೆಯಾಗುತ್ತವೆ. ಹೆಚ್ಚಾಗುವ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.
ಕರ್ನಾಟಕದಲ್ಲಿ ಎಷ್ಟಾಗುತ್ತೆ?
ರಾಜ್ಯದಲ್ಲಿ ಪ್ರಸ್ತುತ 28 ಲೋಕಸಭಾ ಕ್ಷೇತ್ರಗಳಿದ್ದು, ಕಾಯ್ದೆ ಜಾರಿಗೆ ಬಂದರೆ ಅವುಗಳ ಸಂಖ್ಯೆ 42ಕ್ಕೆ ಏರಲಿದೆ. ಹೆಚ್ಚುವರಿ 14 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ವಿಧಾನಸಭೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳ ಟಿಕೆಟ್ ಮಹಿಳೆಯರಿಗೆ ಸಿಗಲಿದೆ.

