ಯಾದಗಿರಿ: ಗಾರೆ ಕೆಲಸ ಮಾಡುವ ಯಾದಗಿರಿ ತಾಲೂಕಿನ ಬಿಳಿಗ್ರಾಮದ ನಿವಾಸಿಗಳಾದ ಆಂಜನೇಯ ಮತ್ತು ಆಂಜನಮ್ಮ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಭರತನಿಗೆ 6 ವರ್ಷ, ಕಿರಿಯ ಮಲ್ಲಿಕಾರ್ಜುನನಿಗೆ 4 ವರ್ಷ. ಆದ್ರೆ ಇಬ್ಬರಿಗೂ ಮಾತು ಬರಲ್ಲ, ಕಿವಿಯೂ ಕೇಳುವುದಿಲ್ಲ.
ತಂದೆ ಆಂಜನೇಯ ಗಾರೆ ಕೆಲಸ ಮಾಡಿ ಬಂದ ಕೂಲಿ ಹಣದಿಂದ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ಪೋಷಕರ ಮಾತುಗಳು ಕೇಳದೇ ಮಂಕಾಗಿ ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಸುಮ್ಮನೆ ಕುಳಿತಿರೋದನ್ನು ಕಂಡು ಮಮನೊಂದ ಆಂಜನೇಯ ಅವರು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಕ್ಕಳು ಹುಟ್ಟುತ್ತಲೇ ಕಿವುಡು-ಮೂಕರಾಗಿದ್ದರೆಂದು ವೈದ್ಯರು ತಿಳಿಸಿದ್ದಾರೆ. ಈ ಮಾತನ್ನು ಕೇಳಿ ಪೋಷಕರಿಗೆ ಸಿಡಿಲು ಬಡಿದಂತಾಗಿದೆ.
ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಲವು ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಆಗುತ್ತಿಲ್ಲ. ಕಿವುಡ-ಮೂಕ ಮಕ್ಕಳ ಪೋಷಣೆ ಹೆತ್ತವರಿಗೆ ತಿಳಿಯದಾಗಿದ್ದು, ಮಕ್ಕಳ ವರ್ತನೆಗೆ ತಂದೆ-ತಾಯಿ ಹೊಂದಿಕೊಂಡು ಹೋಗುತ್ತಿದ್ದಾರೆ. ವೈದ್ಯರು ಕಿವಿ ಕೇಳುವ ಯಂತ್ರ ಹಾಕಿದ್ರೆ ಮಕ್ಕಳಿಗೆ ಕಿವಿ ಕೇಳುತ್ತೆ ಎಂದಿದ್ದಾರೆ. ಒಂದು ಕಿವಿ ಕೇಳುವ ಯಂತ್ರಕ್ಕೆ ಸುಮಾರು 50 ರಿಂದ 60 ಸಾವಿರ ರೂಪಾಯಿ ಖರ್ಚಾಗುತ್ತದೆ.
ಕೂಲಿ ಕೆಲಸ ಮಾಡಿ ಇಡೀ ಸಂಸಾರದ ಜವಬ್ದಾರಿಯನ್ನು ಹೊತ್ತಿರುವ ತಂದೆಗೆ ಇದು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ನಮ್ಮ ಮಾತು ಕೇಳುವಂತೆ ಮಾಡಿ, ಕಿವಿ ಕೇಳುವ ಯಂತ್ರ ಕೊಡಿಸಿ. ಅವರ ಶಿಕ್ಷಣಕ್ಕೆ ನೆರವಾಗಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
https://www.youtube.com/watch?v=F-cDEcS86Mg