ಬೆಂಗಳೂರು: ನಮ್ಮ ಸರ್ಕಾರ ಯಾವುದೇ ಖಾಸಗಿ ದೇವಾಲಯಗಳನ್ನು (Private Temple) ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ (Mujarai Department) ತೆಗೆದುಕೊಳ್ಳುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ದೇಗುಲವನ್ನು ಮುಜರಾಯಿ ವ್ಯಾಪ್ತಿಗೆ ತರಲು ಟಾರ್ಗೆಟ್ ಮಾಡಿ ನೋಟಿಸ್ ಕೊಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳಿಂದ ಸಮಾವೇಶದಲ್ಲಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆಲ ಹಿಂದೂ ಸಂಘಟನೆಗಳಿಗೆ ಮಾಹಿತಿ ಕೊರತೆಯಿಂದ ತಪ್ಪು ತಿಳುವಳಿಕೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಯಾವುದೇ ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ. ನಮ್ಮ ಸರ್ಕಾರ ಬಂದ ಮೇಲಂತೂ ಒಂದೂ ತೊಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ಸಂದರ್ಭದಲ್ಲಿ ಹಣ ದುರಪಯೋಗ ಆಗುತ್ತಿದೆ. ಟ್ರಸ್ಟಿಗಳಲ್ಲಿ ಜಗಳಗಳು ಬಂದಾಗ ಅವರು ಕೋರ್ಟ್ಗೆ ಹೋಗ್ತಾರೆ. ಈ ರೀತಿಯ ಸಂದರ್ಭಗಳಲ್ಲಿ ಹಿಂದೆ ಕೆಲವು ದೇವಾಲಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಯಾವ ದೇವಾಲಯವನ್ನೂ ತೆಗೆದುಕೊಂಡಿಲ್ಲ, ತೆಗೆದುಕೊಳ್ಳೋ ಉದ್ದೇಶವಿಲ್ಲ ಎಂದು ಹೇಳಿದರು.
ನಮ್ಮ ಮುಜರಾಯಿ ಇಲಾಖೆಯ 34 ಸಾವಿರ ದೇವಾಲಯಗಳಿವೆ. ಆರೋಪ ಮಾಡೋ ಹಿಂದೂ ಸಂಘಟನೆಗಳು ಬೇಕಿದ್ರೆ ಮುಜರಾಯಿ ದೇವಸ್ಥಾನಗಳನ್ನು ದತ್ತು ತೆಗೆದುಕೊಳ್ಳಲಿ, ಅಭಿವೃದ್ಧಿ ಮಾಡಲಿ. ಪ್ರೈವೆಟ್ ದೇವಸ್ಥಾನಗಳನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ ಅಂತ ಕರ್ನಾಟಕ ಜನತೆಗೆ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಪ್ರಿನ್ಸಿಪಾಲ್, ವಾರ್ಡನ್, ಡಿ-ಗ್ರೂಪ್ ನೌಕರರ ಅಮಾನತಿಗೆ ಸೂಚನೆ
ಬಳ್ಳಾರಿಯ ಕನ್ನಿಕಾ ಪರಮೇಶ್ವರಿ ದೇವಾಲಯಕ್ಕೆ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ಕೋರ್ಟ್ಗೆ ಹೋದಾಗ ಜಿಲ್ಲಾಧಿಕಾರಿ ನೋಟಿಸ್ ಕೊಟ್ಟಿರಬಹುದು ಎಂದರು. ಹಿಂದೂ ದೇಗುಲಗಳನ್ನು ಮುಜರಾಯಿ ವ್ಯಾಪ್ತಿಯಿಂದಲೇ ಕೈಬಿಟ್ಟು ಸ್ವತಂತ್ರಗೊಳಿಸಬೇಕು ಎಂಬ ಹಿಂದೂ ಸಂಘಟನೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, 35 ಸಾವಿರ ಮುಜರಾಯಿ ದೇವಸ್ಥಾನಗಳಿವೆ. ಅದ್ರಲ್ಲಿ 34 ಸಾವಿರ ಸಿ ದರ್ಜೆ ದೇವಾಲಯಗಳಿವೆ. ಆ ದೇವಾಲಯಗಳನ್ನು ತೆಗೆದುಕೊಂಡು ಅಭಿವೃದ್ಧಿ ಮಾಡಲಿ. ನಮ್ಮ ಇಲಾಖೆ ಪ್ರೈವೆಟ್ನವರು ಬಂದು ದೇವಾಲಯಗಳನ್ನು ಅಭಿವೃದ್ಧಿ ಮಾಡುತ್ತಾರೆ ಅಂದರೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದರು.
ನಾನು ಮುಜರಾಯಿ ಸಚಿವನಾದಮೇಲೆ ಕೆಲ ಅಭಿವೃದ್ಧಿ ಕೆಲಸಗಳು ಆಗಿವೆ. 40 ಸಾವಿರ ಅರ್ಚಕರು ಇದ್ದಾರೆ. ಅರ್ಚಕರ ಮಕ್ಕಳಿಗೆ ಈ ವರ್ಷದಿಂದ 5 ಸಾವಿರದಿಂದ 1 ಲಕ್ಷ ರೂ. ವರೆಗೆ ಸ್ಕಾಲರ್ಶಿಪ್ ಕೊಡುತ್ತೇವೆ. ಇದನ್ನು ಜನವರಿಯಿಂದ ಪ್ರಾರಂಭ ಮಾಡುತ್ತೇವೆ. ಈ ಹಿಂದೆ ಅರ್ಚಕರು ಸಾವನ್ನಪ್ಪಿದರೆ 35 ಸಾವಿರ ರೂ. ಕೊಡುತ್ತಿದ್ದರು. ಅದನ್ನು 2 ಲಕ್ಷ ರೂ.ಗೆ ಏರಿಸಿದ್ದೇನೆ. ಕಾಶಿ ಯಾತ್ರೆಗೆ ಅರ್ಚಕರು ಹಾಗೂ ಅವರ ಮನೆಯವರು 1,200 ಜನ ಉಚಿತವಾಗಿ ಕರೆದುಕೊಂಡು ಹೋಗಬಹುದು. ಆನುವಂಶಿಕವಾಗಿ ಅರ್ಚಕರ ಹಕ್ಕುದಾರರು ಪೂಜೆ ಮಾಡಲು ಅವಕಾಶ ಮಾಡಿದ್ದೇನೆ. ದೇವಾಲಯಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರು ನೇರವಾಗಿ ಹೋಗೋದು, ಸಿಸಿಟಿವಿ ಅಳವಡಿಕೆ, ಮೊಬೈಲ್ ಬ್ಯಾನ್ ಹಲವು ಕ್ರಮಗಳನ್ನು ಕೈಗೊಂಡಿದ್ದೇನೆ. ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಿದ್ದೇನೆ. ಯಲ್ಲಮ್ಮ ದೇವಾಲಯ, ಚಾಮುಂಡಿ ದೇವಾಲಯಕ್ಕೆ ಹೋಗೋ ಭಕ್ತಾದಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ವಿಶೇಷ ಪ್ರಾಧಿಕಾರ ಮಾಡೋ ಪ್ಲಾನ್ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತ್ಯಸಂಸ್ಕಾರವಾದ ಸ್ಥಳದಲ್ಲಿ ವಿಷ್ಣು ಅಪ್ಪಾಜಿ ಪುಣ್ಯಭೂಮಿ ಆಗಬೇಕು: ತಡರಾತ್ರಿ ಕಿಚ್ಚ ಸುದೀಪ್ ಟ್ವೀಟ್