ಮೈಸೂರು: ಶಾಸಕ ರಾಮದಾಸ್ ಮನೆ ಹಾಗೂ ಕಚೇರಿ ಮುಂದೆ ಪ್ರೇಮಕುಮಾರಿ ಹೈಡ್ರಾಮಾ ನಡೆಸಿದ್ದು, ತಮ್ಮ ವೇಲ್ನ್ನು ಕತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಾಮದಾಸ್ ಅವರು ನೀಡಿದ್ದ ಮಾತು ತಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರೇಮಕುಮಾರಿ, ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಚುನಾವಣೆಯ ನಾಮಪತ್ರ ಪಡೆದಿದ್ದರು. ಆದರೆ ಈಗ ಮೋಸ ಮಾಡಿದ್ದಾರೆ ಎಂದು ಗೋಳಾಟ ನಡೆಸಿದರು.
ಈ ವೇಳೆ ಸ್ಥಳಕ್ಕೆ ಬಂದ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಪ್ರೇಮಾ ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ ಪೊಲೀಸರ ಮನವೊಲಿಕೆಗೂ ಬಗ್ಗದ ಪ್ರೇಮಕುಮಾರಿ ತನಗೆ ಆಗಿರುವ ಅನ್ಯಾಯಕ್ಕೆ ಪ್ರತಿಭಟನೆ ನಡೆಸುತ್ತಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಪ್ರೇಮಕುಮಾರಿ ವಿರುದ್ಧ ಶಾಸಕ ರಾಮದಾಸ್ ಬೆಂಬಲಿಗರು ದೂರು ನೀಡಿದ್ದು, ದೂರಿನ ಅನ್ವಯ ಪ್ರೇಮಕುಮಾರಿ ಅವರನ್ನು ವಿದ್ಯಾರಣ್ಯಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯೂ ಶಾಸಕರ ಕಚೇರಿ ಮುಂದೇ ಆಗಮಿಸಿದ್ದ ಪ್ರೇಮಕುಮಾರಿ ರಾಮದಾಸ್ ಅವರನ್ನು ಈ ಕ್ಷಣವೇ ನೋಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ವೇಳೆಯೂ ಪೊಲೀಸರು ಮಧ್ಯ ಪ್ರವೇಶಿಸಿ ಶಾಸಕರ ಕಚೇರಿಗೆ ಮುಂದೇ ನಿಂತು ಗಲಾಟೆ ಮಾಡುವುದು ಸರಿಯಲ್ಲ. ನಿಮ್ಮ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದರು.