ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ ರಾಬರ್ಸ್ ಕಾಲಿಗೆ ಗುಂಡು ಹೊಡೆದು ಚಳಿಬಿಡಿಸಿದ್ದಾರೆ.
ಅಶ್ರಪ್ ಖಾನ್ ಪೊಲೀಸರಿಂದ ಗುಂಡೇಟಿಗೊಳಗಾದ ಆರೋಪಿ. ಕೆಂಪೇಗೌಡ ಏರ್ ಪೋರ್ಟ್ ಬಳಿ ಈ ಘಟನೆ ನಡೆದಿದೆ. ಏರ್ ಪೋರ್ಟ್ ರಸ್ತೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ರಾಬರ್ಸ್ ಗ್ಯಾಂಗ್ ಹಾವಳಿ ಇಟ್ಟಿತ್ತು. ಮುಂಜಾನೆ ಮೂರು ಗಂಟೆಯಿಂದ ಆರು ಗಂಟೆಯ ಒಳಗೆ ಒಟ್ಟು 6 ಕಡೆ ಮಾರಕಾಸ್ತ್ರಗಳಿಂದ ಬೆದರಿಸಿ ಸುಲಿಗೆ ಮಾಡಿದ್ದರು.
ಅಷ್ಟೇ ಅಲ್ಲದೇ ಏರ್ ಪೋರ್ಟ್ ರಸ್ತೆಯಲ್ಲಿ ಓಡಾಡುವ ಕ್ಯಾಬ್ ಹಾಗೂ ಆಟೋ ಚಾಲಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಪ್ರತ್ಯೇಕ ಎರಡು ಬೈಕ್ಗಳಲ್ಲಿ ಕಾರ್ಯಚರಣೆಗಿಳಿದಿದ್ದ ಗ್ಯಾಂಗನ್ನು ಬೇಟೆಯಾಡಲು ನಿರ್ಧರಿಸಿದ್ದರು. ಅದರಂತೆಯೇ ಚಿಕ್ಕಜಾಲ ಹಾಗೂ ದೇವನಹಳ್ಳಿ ಇನ್ಸ್ ಪೆಕ್ಟರ್ ಜಂಟಿಯಾಗಿ ಆರೋಪಿಗಳ ಬೆನ್ನು ಬಿದ್ದಿದ್ದರು.
ಯಮಹ ಬೈಕಿನಲ್ಲಿ ಬಂದ ರಾಬರ್ಸ್ ಗೆ ಶರಣಾಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಆರೋಪಿಗಳು ಏಕಾಏಕಿ ಕೈಯಲ್ಲಿದ್ದ ಮಾರಕಾಸ್ತ್ರದಿಂದ ಪೇದೆ ಉಮೇಶ್ ಮೇಲೆ ಹಲ್ಲೆ ಮಾಡಿದ್ದರು. ಕೊನೆಗೆ ಆತ್ಮರಕ್ಷಣೆಗಾಗಿ ಆರೋಪಿ ಅಶ್ರಪ್ ಖಾನ್ ಕಾಲಿಗೆ ಎರಡು ಸುತ್ತಿನ ಗುಂಡು ಹಾರಿಸಿ ಎಡೆಮುರಿ ಕಟ್ಟಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಅಯುಕ್ತ ಸಿಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಘಟನೆ ಸಂಬಂದ ದೇವನಹಳ್ಳಿ ಹಾಗೂ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸದ್ಯ ಅಶ್ರಪ್ ಖಾನ್ ಬಂಧಿಸಿರುವ ಪೊಲೀಸರು ಉಳಿದ ಮೂವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv