ಮೈಸೂರು: ಯಾವುದೇ ಹೇಳಿಕೆ ನೀಡದಂತೆ ವಿಚಾರವಾದಿ ಕೆ.ಎಸ್ ಭಗವಾನ್ ಅವರಿಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ಭಗವಾನ್ ಈಗಾಗಲೇ ಶ್ರೀ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದರಿಂದ ಭಗವಾನ್ ಮನೆಯ ಮುಂದೆ ಹಲವರು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಭಗವಾನ್ ಮನೆ ಮುಂದೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದೀಗ ಪೊಲೀಸರು ಭಗವಾನ್ ಅವರಿಗೆ ಯಾವುದೇ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ ಎಂದ ಮೂಲಗಳು ತಿಳಿಸಿವೆ.
ಪೊಲೀಸರು ಭಗವಾನ್ ಮನೆಯ ಬಳಿ ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ. ರಾಮ ಮಂದಿರ ಯಾಕೆ ಬೇಡ ಎನ್ನುವ ಪುಸ್ತಕದ ಮೂಲಕ ರಾಮ, ಆಂಜನೇಯ, ಸೀತೆಯ ಬಗ್ಗೆ ನಿಂದಿಸಿದ ಪ್ರೊಫೆಸರ್ ಭಗವಾನ್ ಸದ್ಯ ತೀವ್ರ ಚರ್ಚೆಗೀಡಾಗಿದ್ದರು.
ಜೀವಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಭಗವಾನ್ ಭದ್ರತೆಗಾಗಿ ರಾಜ್ಯ ಸರ್ಕಾರ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಸಶಸ್ತ್ರ ಮೀಸಲು ಪಡೆಯ ಮೂವರು ಪೊಲೀಸರು ಮತ್ತು ಓರ್ವ ಪೊಲೀಸ್ ಅಧಿಕಾರಿ ಭಗವಾನ್ ಮನೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಭಗವಾನ್ ಹೋದ ಬಂದ ಕಡೆಯೆಲ್ಲಾ ಓರ್ವ ಗನ್ಮ್ಯಾನ್ ಇರುತ್ತಾರೆ. ಮೈಸೂರಿನಲ್ಲಿರುವ ಭಗವಾನ್ ಮನೆಗೆ ಸರ್ಕಾರ ಕಡೆಯಿಂದಲೇ ಸಿಸಿಟಿವಿ ಅಳವಡಿಸಲಾಗಿದೆ. ಅದರ ನಿರ್ವಹಣೆಯನ್ನೂ ಸರ್ಕಾರವೇ ಮಾಡುತ್ತಿದೆ.
ಈ ಬಗ್ಗೆ ಭಗವಾನ್ ಅವರನ್ನು ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, “ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಇದು ಸರ್ಕಾರ ಮತ್ತು ಸದರಿ ಇಲಾಖೆಗೆ ಬಿಟ್ಟ ವಿಷಯವಾಗಿದೆ. ಸಂವಿಧಾನ ಪ್ರಕಾರವಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಭದ್ರತೆಗೆ ಖರ್ಚು ಆಗುತ್ತಿರುವ ಹಣದ ಬಗ್ಗೆ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಷಯ. ನನಗೆ ಈ ವಿಚಾರದ ಬಗ್ಗೆ ಕೇಳಬೇಡಿ” ಎಂದು ಹಾರಿಕೆಯ ಉತ್ತರ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv