ಬೆಂಗಳೂರು: ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು, ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ ಕಾಲಿನಲ್ಲೇ ಒದೀತಿದ್ದಾಕೆ ಇದೀಗ ಸಾಮಾಜಿಕ ಕಾರ್ಯಕರ್ತೆ ವೇಷ ಹಾಕಿ ಕಮಿಷನರ್ ಅವರಿಗೇ ಸನ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ.
ಹೌದು, ರೌಡಿ ಯಶಸ್ವಿನಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ಗೆ ಸನ್ಮಾನ ಮಾಡಿದ್ದಾರೆ. ಶ್ರೀರಾಮಸೇನೆಯ ಮುತಾಲಿಕ್ ಜೊತೆ ನಿಂತು ಭಾಸ್ಕರ್ ರಾವ್ ಅವರಿಗೆ ಶಾಲು ಹೊದಿಸಿ, ಗಂಧದ ಹಾರ ಹಾಕಿದ್ದಾರೆ. ಯಶಸ್ವಿನಿ ಮತ್ತು ಈಕೆಯ ಪತಿ ದಡಿಯಾ ಮಹೇಶ್ ಅವರ ಸನ್ಮಾನವನ್ನು ನಗುಮೊಗದಿಂದಲೇ ಭಾಸ್ಕರ್ ರಾವ್ ಸ್ವೀಕರಿಸಿದ್ದಾರೆ.
ಅಂದಹಾಗೆ, ನಿನ್ ಹೆಂಡತಿಯದ್ದು ಜಾಸ್ತಿ ಆಯ್ತು, ಬುದ್ಧಿ ಕಲಿಸೋಕೆ ಆಗಲ್ವ ಅವಳಿಗೆ ಎಂದು ಸಿಸಿಬಿ ಡಿಸಿಪಿಯಾಗಿದ್ದ ಗಿರೀಶ್ ಈ ಹಿಂದೆ ಅವಾಜ್ ಹಾಕಿದ್ದರು. ಈ ವೇಳೆ, ನನ್ ಮಾತು ಕೇಳಲ್ಲ ಸರ್ ಅವಳು, ನೀವೇ ಬುದ್ಧಿ ಕಲಿಸಿ ಅಂತ ರೌಡಿ ದಡಿಯಾ ಮಹೇಶ್ ಹೇಳಿದ್ದನು. ಅಂದು ಗಢ ಗಢ ನಡುಗಿದ್ದ ರೌಡಿಶೀಟರ್ಗಳು ಇಂದು ಪೊಲೀಸರಿಗೆ ಫುಲ್ ಕ್ಲೋಸ್ ಆಗಿದ್ದಾರೆ.
ಅಲೋಕ್ ಕುಮಾರ್, ಗಿರೀಶ್ ರಂತಹ ಅಧಿಕಾರಿಗಳು ಎತ್ತಂಗಡಿಯಾಗಿದ್ದೇ ತಡ, ಕಮಿಷನರ್ ಗೆ ಸನ್ಮಾನ ಮಾಡೋವಷ್ಟು ಬೆಳೆದು ಬಿಟ್ಟಿದ್ದಾರೆ. ಸದ್ಯ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿರುವ ಯಶಸ್ವಿನಿ, ಈಗ ಕಮಿಷನರ್ ಗೆ ಸನ್ಮಾನ ಮಾಡಿದ ಫೊಟೊಗಳು ವೈರಲ್ ಆಗುತ್ತಿವೆ. ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡ ಕಮಿಷನರ್ ಭಾಸ್ಕರ್ ರಾವ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ.