ಮೈಸೂರು: ಅಪಘಾತದ ವಿಚಾರದಲ್ಲಿ ಬಸ್ ಚಾಲಕನ ವಿರುದ್ಧ ದೂರು ನೀಡಲು ಬಂದ ಮಹಿಳೆಗೆ ಪೊಲೀಸ್ ಪೇದೆ ನಶೆಯಲ್ಲಿ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಂತರ ಸಂತೆ ಉಪ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆ ಶ್ರೀನಿವಾಸ್ ಪಾನಮತ್ತರಾಗಿ ತಮ್ಮನ್ನು ನಿಂದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪೇದೆ ಮತ್ತು ಮಹಿಳೆ ಜೊತೆಗಿನ ವಾಗ್ವಾದದ ದೃಶ್ಯಾವಳಿಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಲಾಗಿದೆ.
ಎಚ್.ಡಿ. ಕೋಟೆಯ ರಾಘವೇಂದ್ರ ಅವರ ಕುಟುಂಬ ಸಫಾರಿಗಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿತ್ತು. ಈ ವೇಳೆ ಕೆಎಸ್ಆರ್ಟಿಸಿ ಬಸ್ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಕುಟುಂಬದಲ್ಲಿನ ಮಹಿಳೆ ಎಚ್.ಡಿ. ಕೋಟೆಯ ಅಂತರ ಸಂತೆಯ ಉಪ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಈ ವೇಳ ಕರ್ತವ್ಯದಲ್ಲಿದ್ದ ಪೇದೆ ಶ್ರೀನಿವಾಸ್ ದೂರು ಪಡೆಯದೆ ಬಸ್ ಚಾಲಕನ ಪರ ವಕಾಲತ್ತು ವಹಿಸಿದ್ದಾರೆ. ಅಲ್ಲದೆ ಶ್ರೀನಿವಾಸ್ ಮದ್ಯಪಾನ ಮಾಡಿ ತಮ್ಮನ್ನು ಅವಾಚ್ಯವಾಗಿ ನಿಂದಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಈಗ ಈ ಪೇದೆಯ ವಿರುದ್ಧ ಮಹಿಳೆ ದೂರು ನೀಡಲು ಮುಂದಾಗಿದ್ದಾರೆ.