– ಬಿಜೆಪಿ ಪ್ರಾಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್
– ದೇಶಭಕ್ತಿ ಹೆಸರಲ್ಲಿ ಗಾಂಧಿಯನ್ನ ಕೊಂದಿದ್ದೇ ಬಿಜೆಪಿ ಸಾಧನೆ
ಮೈಸೂರು: ಬಿಜೆಪಿ ಪ್ರಾಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಇದ್ದಂತೆ. ದೇಶಭಕ್ತಿ ಹೆಸರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಕೊಂದಿದ್ದೇ ಬಿಜೆಪಿ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಭಕ್ತಿ ಹೆಸರಲ್ಲಿ ಗಾಂಧಿಯನ್ನ ಕೊಂದಿದ್ದೇ ಬಿಜೆಪಿ ಸಾಧನೆ. ಬಿಜೆಪಿ ಅವರು ದೇಶ ಭಕ್ತಿ ಹೆಸರಲ್ಲಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ತಿಪ್ಪರಲಾಗಾ ಹಾಕಿದರೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
ನೀವು ಚಲಾಯಿಸುವ ಮತ ಸೇನೆಗೆ ನೀಡಿದಂತೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಅವರು, ಕಳೆದ 16 ಸಾರ್ವತ್ರಿಕ ಚುನಾವಣೆಯಲ್ಲಿ ಸೈನ್ಯ ಇರಲಿಲ್ಲವೆ? ಜೈ ಜವಾನ್ ಜೈ ಕಿಸಾನ್ ಎಂದು ಹೇಳಿದವರು ಯಾರು? ದೇಶ ಭಕ್ತಿಯ ಪಾಠವನ್ನು ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ. ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಬಿಜೆಪಿ ಸರ್ಕಾರ ಇದೀಗ ಭಾವನಾತ್ಮಕ ವಿಚಾರಗಳನ್ನು ಮುಂದಿಡುತ್ತಿದೆ. ಪುಲ್ವಾಮಾ ದಾಳಿ ಪ್ರಕರಣವನ್ನು ಮುಂದಿಡುತ್ತಿದೆ. ಹಾಗಾದ್ರೆ ಪ್ರಧಾನಿ ಮೋದಿಯೇನು ಗನ್ ಹಿಡಿದುಕೊಂಡು ಹೋಗಿದ್ದರಾ ಎಂದು ಸಿದ್ದರಾಮಯ್ಯ ಬಿಜೆಪಿಗೆ ಪ್ರಶ್ನಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿರಲಿಲ್ಲ. ಆದ್ರೆ ನಾನು ಸ್ವಾತಂತ್ರ್ಯ ಬರುವ ಮೊದಲು ಹುಟ್ಟಿದ್ದೇನೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ದೇಶದ ಸೈನ್ಯವನ್ನು ನರೇಂದ್ರ ಮೋದಿ ಸೈನ್ಯ ಎಂದು ಭಟ್ಟಂಗಿತನ ಪ್ರದರ್ಶಿಸಿದ್ದಾರೆ. ಇಂತಹವರಿಂದ ದೇಶ ರಕ್ಷಣೆ ಸಾಧ್ಯವೇ ಎಂದು ಪ್ರಶ್ನಿಸಿ ಟಾಂಗ್ ಕೊಟ್ಟರು.