ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಪೂಜೆ ಹಕ್ಕಿಗಾಗಿ ಹಾಗೂ ದಕ್ಷಿಣೆ ಕಾಸಿಗಾಗಿ ಅರ್ಚಕರ ನಡುವೆ ಎದ್ದಿದ್ದ ವಿವಾದಕ್ಕೆ ಇದೀಗ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು ಭಕ್ತರಿಗೆ ಮಹಾಬಲೇಶ್ವರನ ದರ್ಶನಕ್ಕೆ ಆಡಳಿತ ಸಮಿತಿ ಅವಕಾಶ ಕಲ್ಪಿಸಿದೆ. ವಿವಾದ ಎಬ್ಬಿಸಿದ ಅರ್ಚಕರಿಗೆ ಆಡಳಿತ ಉಸ್ತುವಾರಿ ಸಮಿತಿ ಶಾಕ್ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ರಾಮಚಂದ್ರಾಪುರ ಮಠದ ಆಡಳಿತದಿಂದ ಆಡಳಿತ ಉಸ್ತುವಾರಿ ಸಮಿತಿ ಸುಪರ್ದಿಗೆ ಬಂದ ನಂತರ ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರ ನಡುವೆ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ, ದಕ್ಷಿಣೆ ಕಾಸಿನ ಹಕ್ಕಿಗಾಗಿ ಸಂಘರ್ಷ ಏರ್ಪಟ್ಟಿದ್ದರಿಂದ ಭಕ್ತರಿಗೆ ದೇವರ ಪೂಜೆ ಹಾಗೂ ಆತ್ಮಲಿಂಗ ಸ್ಪರ್ಶಕ್ಕೆ ನಿರ್ಬಂಧ ಹೇರಲಾಗಿತ್ತು.
ಈಗ ಉಸ್ತುವಾರಿ ಸಮಿತಿ ನಿರ್ಧಾರ ಪ್ರಕಟಿಸಿದ್ದು ಭಕ್ತರಿಗೆ ಆತ್ಮಲಿಂಗ ಸ್ಪರ್ಶ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ತಮ್ಮ ಹಕ್ಕಿಗಾಗಿ ಗದ್ದಲ ಎಬ್ಬಿಸಿದ್ದ ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರಿಗೆ ಭಕ್ತರನ್ನು ಕರೆತಂದು ಪೂಜೆ ಮಾಡಲು ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ – ಗೊಂದಲಕ್ಕೆ ತೆರೆ ಎಳೆದ ಬೊಮ್ಮಾಯಿ
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ.ಎನ್. ಶ್ರೀಕೃಷ್ಣ ರವರ ಅಧ್ಯಕ್ಷತೆಯಲ್ಲಿರುವ ಉಸ್ತುವಾರಿ ಸಮಿತಿಯು ಅರ್ಚಕರ ಹಕ್ಕಿನ ಬಗ್ಗೆ ತೀರ್ಮಾನ ಮಾಡುವ ಸಮಿತಿ ಅಲ್ಲ. ದಿನ ನಿತ್ಯದ ಕಾರ್ಯಗಳಿಗೆ ಆಡಳಿತ ಮಾಡುವ ನಿರ್ವಹಣಾ ಸಮಿತಿಯಾಗಿದೆ. ಅನುವಂಶೀಯ ಹಾಗೂ ಉಪದೀವಂತ ಅರ್ಚಕರು ಕೋರ್ಟ್ ಆದೇಶ ತಂದರೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುವುದು. ಯಾರಿಗೂ ವೈಯುಕ್ತಿಕವಾಗಿ ಪೂಜೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎರಡೂ ಗುಂಪಿನ ಅರ್ಚಕರಿಗೆ ಶಾಕ್ ನೀಡಿದೆ. ಈ ಕುರಿತು ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ವರು ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ ತಿಂಗಳು ದೇಗುಲ ನಿರ್ವಹಣಾ ಸಮಿತಿಯು ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರ ಪ್ರತ್ಯೇಕ ಎರಡು ಸಭೆಯನ್ನು ಮಾಡಿ ಅಹವಾಲನ್ನು ಸ್ವೀಕರಿಸಿತ್ತು. ಆದರೆ ಯಾವುದೇ ನಿರ್ಧಾರಕ್ಕೆ ಸಮಿತಿ ಬಂದಿರಲಿಲ್ಲ. ಆದರೇ ಇದೀಗ ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿಗೆ ಆಡಳಿತದ ಕುರಿತು ತೀರ್ಮಾನ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಇದರಂತೆ ಭಕ್ತರಿಗೆ ಇದೀಗ ಮಹಾಬಲೇಶ್ವರನ ದರ್ಶನ, ಸ್ಪರ್ಶ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಸಮಿತಿ ನಿರ್ಧಾರದಂತೆ ಸಂಪ್ರದಾಯದಂತೆ ಸಮಿತಿಯಿಂದ ನೇಮಕವಾದ ಅರ್ಚಕರು ದಿನನಿತ್ಯದ ಕಾರ್ಯ ಮಾಡಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.