ಹೈದರಾಬಾದ್: ಮದ್ಯ ವ್ಯಸನಿ ನಿರುದ್ಯೋಗಿ ಮಗನ ಕಿರುಕುಳದಿಂದ ಬೇಸತ್ತು, ಆತನ ಹತ್ಯೆಗೆ ತಂದೆ-ತಾಯಿಯೇ ಸುಪಾರಿ (Supari) ಕೊಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಾಯಿ ರಾಮ್ (26) ಕೊಲೆಯಾದ ಯುವಕ. ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮತ್ತು ಅವರ ಪತ್ನಿ ಖಮ್ಮಂನಲ್ಲಿ ತಮ್ಮ ಮಗನನ್ನು ಹತ್ಯೆ ಮಾಡಲು 8 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷತ್ರಿಯ ರಾಮ್ ಸಿಂಗ್ ಮತ್ತು ರಾಣಿ ಬಾಯಿ ಹಾಗೂ ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ವೈಫೈ ಪಾಸ್ವರ್ಡ್ ಹಂಚಿಕೊಳ್ಳದ್ದಕ್ಕೆ ನಡೆಯಿತು ಯುವಕನ ಭೀಕರ ಕೊಲೆ
ಸಾಯಿ ರಾಮ್ ದೇಹವನ್ನು ಸೂರ್ಯಪೇಟೆಯ ಮೂಸಿಯಲ್ಲಿ ಎಸೆಯಲಾಗಿತ್ತು. ಒಂದು ದಿನದ ನಂತರ ಪತ್ತೆಯಾಗಿದೆ. ಆಪಾದಿತ ಹಂತಕರಲ್ಲಿ ಒಬ್ಬ ತಲೆಮರೆಸಿಕೊಂಡಿದ್ದಾನೆ. ಅಪರಾಧಕ್ಕೆ ಬಳಸಿದ ಕುಟುಂಬದ ಕಾರನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳಿಂದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮಗ ಕಾಣೆಯಾಗಿದ್ದ ಬಗ್ಗೆ ಪೋಷಕರು ದೂರು ದಾಖಲಿಸಿರಲಿಲ್ಲ. ನಂತರ ಮಗನ ಹತ್ಯೆ ಬಗ್ಗೆ ತಿಳಿದು ಶವವನ್ನು ಗುರುತಿಸಲು ಶವಾಗಾರಕ್ಕೆ ಹೋಗಲು ಪೋಷಕರು ಅದೇ ಕಾರನ್ನು ಬಳಸಿದ್ದು ತನಿಖೆಯಿಂದ ತಿಳಿದುಬರಲಿದೆ.
ರಾಮ್ ಸಿಂಗ್, ಮಾರಿಪೆಡಾ ಬಾಂಗ್ಲಾ ಗ್ರಾಮದ ಸರ್ಕಾರಿ ಗುರುಕುಲದ ಪ್ರಾಂಶುಪಾಲರಾಗಿದ್ದರು. ದಂಪತಿಯ ಪುತ್ರಿ ಯುಎಸ್ನಲ್ಲಿ ನೆಲೆಸಿದ್ದಾರೆ. ಸಾಯಿ ರಾಮ್ ತನ್ನ ಹೆತ್ತವರು ಮದ್ಯಪಾನಕ್ಕೆ ಹಣ ನಿರಾಕರಿಸಿದಾಗ ನಿಂದಿಸಿ ಥಳಿಸುತ್ತಿದ್ದ. ಆತನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರೂ ಪ್ರಯೋಜನವಾಗಿರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೊರಗೆ ಬರದಿದ್ರೆ ಕಾಲು ಮುರಿಯುತ್ತೇವೆ- SFI ಕಾರ್ಯಕರ್ತರಿಂದ ಪ್ರಾಂಶುಪಾಲರಿಗೆ ಧಮ್ಕಿ
ಹುಜೂರಾಬಾದ್ ಸರ್ಕಲ್ ಇನ್ಸ್ಪೆಕ್ಟರ್ ರಾಮಲಿಂಗ ರೆಡ್ಡಿ ಅವರ ಪ್ರಕಾರ, ದಂಪತಿ ತಮ್ಮ ಮಗನನ್ನು ಕೊಲ್ಲಲು ರಾಣಿ ಬಾಯಿಯ ಸಹೋದರ ಸತ್ಯನಾರಾಯಣರಿಂದ ಸಹಾಯವನ್ನು ಪಡೆದಿದ್ದರು. ಸತ್ಯನಾರಾಯಣ ಅವರು ಕೊಲೆ ಮಾಡಲು ಮಿರ್ಯಾಲಗೂಡು ಮಂಡಲದ ಆರ್ ರವಿ, ಡಿ ಧರ್ಮ, ಪಿ ಎನ್. ನಾಗರಾಜು, ಡಿ ಸಾಯಿ ಮತ್ತು ಬಿ ರಾಂಬಾಬು ಎಂಬುವರ ನೆರವು ಕೇಳಿದ್ದರು. ಎಂಟು ಲಕ್ಷಕ್ಕೆ ಸುಪಾರಿ ನೀಡಿ 1.5 ಲಕ್ಷ ಮುಂಗಡ ನೀಡಿದ್ದರು.