ಬೆಂಗಳೂರು: ರಮೇಶ್ಗೆ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದೆ. ಆದರೆ ಆತ ಹೀಗೆ ಯಾಕೆ ಮಾಡಿಕೊಂಡನೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಪರಮೇಶ್ವರ್ ತಮ್ಮ ಪಿಎ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ರಮೇಶ್ ಅತ್ಯಂತ ಒಳ್ಳೆಯ ಹುಡುಗ. ನಾನು ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಅಧ್ಯಕ್ಷನಾಗಿದ್ದಾಗಿನಿಂದ ಜೊತೆಯಲ್ಲಿಯೇ ಇದ್ದಾನೆ. ಎಂತಹ ಸಂದರ್ಭದಲ್ಲೂ ಕೂಡ ರಮೇಶ್ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದನು. ದುರದೃಷ್ಟಕರ ಯಾಕೆ ಹೀಗೆ ಮಾಡಿಕೊಂಡಿದ್ದಾನೋ ಗೊತ್ತಿಲ್ಲ. ಇಂದು ಬೆಳಗ್ಗೆ ಅವನು ಹೋಗುವಾಗ ನಾನು ಅವನಿಗೆ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದೆ. ಆದರೆ ಈ ರೀತಿ ಮಾಡಿಕೊಂಡಿದ್ದಾನೆ ಎಂದರೆ ನನಗೆ ನಂಬಲು ಆಗುತ್ತಿಲ್ಲ ಎಂದರು.
ರಮೇಶ್ ಕಸ್ಟಡಿಯಲ್ಲಿ ಇರಲಿಲ್ಲ. ನಾವು ಮನೆಯಲ್ಲಿ ಇದ್ದಾಗ ಐಟಿ ಅಧಿಕಾರಿಗಳು ಅವರನ್ನು ಕೂಡ ಇರಿಸಿಕೊಂಡಿದ್ದರು. ಅಧಿಕಾರಿಗಳು ರಮೇಶ್ನನ್ನು ಇಲ್ಲಿಂದ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಐಟಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ಐಟಿ ವಿಚಾರಣೆ ಎದುರಿಸುವುದಕ್ಕೆ ಆಗಲ್ಲ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಪರಮೇಶ್ವರ್, ಪಿಎ ರಮೇಶ್ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಮೇಶ್ 6 ವರ್ಷದಿಂದ ಪರಮೇಶ್ವರ್ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಆದ ಹಿನ್ನೆಲೆಯಲ್ಲಿ ರಮೇಶ್ ಮನೆ ಮೇಲೂ ದಾಳಿ ನಡೆದಿತ್ತು. ಆದರೆ ಮನೆಯಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ. ಪರಮೇಶ್ವರ್ ಪತ್ರ ವ್ಯವಹಾರದ ಬಗ್ಗೆ ರಮೇಶ್ಗೆ ತಿಳಿದಿತ್ತು. ಹಾಗಾಗಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಪತ್ರ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳು 2 ದಿನ ವಿಚಾರಣೆ ನಡೆಸಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಜೈಲಿಗೆ ಹೋಗ್ತಿಯಾ, ಈಗಾಗಲೇ ನಮಗೆ ಹವಾಲಾ ದಂಧೆ ಸಾಕ್ಷ್ಯ ಸಿಕ್ಕಿದೆ ಎಂದು ಬೆದರಿಕೆ ಹಾಕಿದ್ದರು. ಇದರಿಂದ ರಮೇಶ್ ಹೆದರಿಕೊಂಡಿದ್ದರು ಎನ್ನಲಾಗಿದೆ. ಹಾಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
https://www.youtube.com/watch?v=oXheuw9VFZQ